ವಿಮಾನ ಪತನದಲ್ಲಿ ಗುಜರಾತ್ ನಲ್ಲಿ 16ನೇ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಾಗಿದ್ದ ವಿಜಯ್ ರೂಪಾನಿ ಸಾವು
2016ರಿಂದ 2021ರವರೆಗೆ ಗುಜರಾತ್ ನಲ್ಲಿ 16ನೇ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಾಗಿದ್ದ ವಿಜಯ್ ರೂಪಾನಿ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ AI 171 ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅಹಮದಾಬಾದ್: 2016ರಿಂದ 2021ರವರೆಗೆ ಗುಜರಾತ್ ನಲ್ಲಿ 16ನೇ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಾಗಿದ್ದ ವಿಜಯ್ ರೂಪಾನಿ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ AI 171 ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗುಜರಾತ್ನ ಮಾಜಿ ಮುಖ್ಯಮಂತ್ರಿಯೊಬ್ಬರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಎರಡನೇ ಘಟನೆ ಇದಾಗಿದ್ದು, ರೂಪಾನಿ ಸಾವು ಆರು ದಶಕಗಳ ಹಿಂದೆ ಬಲವಂತ್ರಾಯ್ ಮೆಹ್ತಾ ಸಾವಿನ ಘಟನೆಯನ್ನು ನೆನಪಿಸಿದೆ. ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಟೇಕ್ ಆಫ್ ಆದ ಐದು ನಿಮಿಷಗಳ ನಂತರ ಮೇಘಾನಿ ನಗರದ ಜನವಸತಿ ಪ್ರದೇಶಕ್ಕೆ ಅಪ್ಪಳಿಸಿತ್ತು. ಆ ವಿಮಾನದಲ್ಲಿದ್ದ 242 ಜನರ ಪೈಕಿ 68 ವರ್ಷದ ರೂಪಾನಿ ಕೂಡ ಇದ್ದರು. ಲಂಡನ್ಗೆ ತೆರಳುತ್ತಿದ್ದ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ಓಡಿಸುತ್ತಿದ್ದರು.
ಸೆಪ್ಟೆಂಬರ್ 1965 ರಲ್ಲಿ, ಗುಜರಾತ್ನ ಎರಡನೇ ಮುಖ್ಯಮಂತ್ರಿ ಮತ್ತು ಕಟ್ಟಾ ಗಾಂಧಿವಾದಿ ಬಲವಂತ್ರಾಯ್ ಮೆಹ್ತಾ ಅಹಮದಾಬಾದ್ನಿಂದ ಮಿಥಾಪುರಕ್ಕೆ ತೆರಳುತ್ತಿದ್ದರು. ಆಗ ಭಾರತ-ಪಾಕ್ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ವಾಯುಪಡೆ ವಿಮಾನವನ್ನು ಹೊಡೆದುರುಳಿಸಿತ್ತು. ನಾಗರಿಕ ವಿಮಾನವನ್ನು ಕಂಡು ಭಾರತದ ಯುದ್ಧವಿಮಾನ ಎಂದು ಭಾವಿಸಿದ್ದ ಎರಡು F-86 ಸೇಬರ್ ಜೆಟ್ಗಳು ರಣ್ ಆಫ್ ಕಚ್ ಬಳಿ ಮಿಸೈಲ್ ಹಾರಿಸಿ, ಮೆಹ್ತಾ, ಅವರ ಪತ್ನಿ ಸರೋಜ್ಬೆನ್, ಸಹಾಯಕರು, ಪತ್ರಕರ್ತೆ ಮತ್ತು ಇಬ್ಬರು ಸಿಬ್ಬಂದಿಯ ಸಾವಿಗೆ ಕಾರಣವಾದವು. ಯುದ್ಧದ ನಂತರ ಪಾಕಿಸ್ತಾನ ತಾವೇ ದಾಳಿ ಮಾಡಿದ್ದು ಎಂದು ಒಪ್ಪಿಕೊಂಡಿತ್ತು. ಆದರೆ, ಕ್ಷಮೆಯಾಚಿಸಲಿಲ್ಲ.
ಇಂತಹ ದುರಂತಗಳತ್ತ ನೋಡುವುದಾದರೆ, ಗುಜರಾತ್ ಮಾತ್ರ ಅಲ್ಲ. 2009ರಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ನಲ್ಲಮಲ ಕಾಡುಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಕೆಟ್ಟ ಹವಾಮಾನ, ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ನಾಶವಾಗಿತ್ತು. 2011ರಲ್ಲಿ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ಅಪಘಾತಕ್ಕೀಡಾಗಿತ್ತು. ಖಂಡು ಮೃತದೇಹವು 13,700 ಅಡಿ ಎತ್ತರದಲ್ಲಿ ಪತ್ತೆಯಾಗಿತ್ತು.
ಇದನ್ನು ಓದಿ: