ಕಾಣೆಯಾದ ವ್ಯಕ್ತಿ ಹುಡುಕುವ ಸಂದರ್ಭ 2 ಶವ ಪತ್ತೆ: ಸಕಲೇಶಪುರದಲ್ಲಿ ಮಳೆ ಸಾವು
ಸಕಲೇಶಪುರ ತಾಲ್ಲೂಕಿನ ತಿನಗನಹಳ್ಳಿಯಲ್ಲಿ ನಂಜಯ್ಯ (56) ಎಂಬ ವ್ಯಕ್ತಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇನ್ನೊಂದು ಘಟನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಲ್ಲುದೊಡ್ಡಿ ಗ್ರಾಮದ ಮುರುಗೇಶ್ (65) ಎಂಬ ಕಾರ್ಮಿಕ ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಂಜಯ್ಯ ಮೇ 26ರಂದು ಜಮೀನಿಗೆ ತೆರಳಿ ಕಾಣೆಯಾಗಿದ್ದರು. ಕುಟುಂಬ ಸದಸ್ಯರು ದೂರು ನೀಡಿದ ಬಳಿಕ ನಡೆಸಿದ ಹುಡುಕಾಟದಲ್ಲಿ ನಿರಂತರ ಮಳೆಯಿಂದ ತೊಂದರೆಯಾದರೂ, ಮಳೆ ಕಡಿಮೆಯಾದ ಬಳಿಕ ಸಂಜೆ ಸಕಲೇಶಪುರ ತಾಲ್ಲೂಕಿನ ತಿನಗನಹಳ್ಳಿಯಲ್ಲಿ ಅವರ ಶವ ಪತ್ತೆಯಾಗಿದೆ. ಭಾರೀ ಮಳೆಯಿಂದ ಕಾಲು ಜಾರಿ ಬಿದ್ದು ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಇದೇ ವೇಳೆ, ನಂಜಯ್ಯನವರ ಹುಡುಕಾಟದ ಸಂದರ್ಭದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮುರುಗೇಶ್ನ ಶವವೂ ಪತ್ತೆಯಾಗಿದೆ. ಮುರುಗೇಶ್ ಕೆಲಸದ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆಯಿದೆ. ಭಾರೀ ಮಳೆಯಿಂದಾಗಿ ಯಾರೂ ರಕ್ಷಣೆಗೆ ಸಿಗದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಎರಡೂ ಘಟನೆಗಳು ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಜಿಲ್ಲೆಯಲ್ಲಿ ಮೊದಲ ಮಳೆಗೆ ಎರಡು ಜೀವಗಳು ಬಲಿಯಾಗಿವೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.