ಪ್ರಚೋದನಕಾರಿ ಭಾಷಣ ಮಾಡುವವರಿಗೆ ಕೆಲ ಸಂಘಟನೆಗಳಿಂದ ರಕ್ಷಣೆ
ಪ್ರಚೋದನಕಾರಿ ಭಾಷಣ ಮಾಡುವವರನ್ನು ಕೆಲ ಸಂಘಟನೆಗಳು ರಕ್ಷಣೆ ಮಾಡುತ್ತಿವೆ. ಅವರಿಗೆ ವಕೀಲರನ್ನು ಕೊಡುತ್ತಾರೆ. ಎಫ್ಐಆರ್ ಆದರೂ ಅವರಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ ಎಂದು ದ.ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡುವವರನ್ನು ಕೆಲ ಸಂಘಟನೆಗಳು ರಕ್ಷಣೆ ಮಾಡುತ್ತಿವೆ. ಅವರಿಗೆ ವಕೀಲರನ್ನು ಕೊಡುತ್ತಾರೆ. ಎಫ್ಐಆರ್ ಆದರೂ ಅವರಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ ಎಂದು ದ.ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಶನಿವಾರ (ಮೇ 31) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೋಮು ಭಾಷಣಗಳನ್ನು ಹತ್ತಿಕ್ಕಲು ಒಂದು ಕಾನೂನು ರೂಪಿಸಬೇಕು. ಯತ್ನಾಳ್ ಹಾಗೂ ಈ ಜಿಲ್ಲೆಯ ಶಾಸಕರು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಭಾಷಣ ಮಾಡಿದವರ ಮೇಲೆ ಎಫ್ಐಆರ್ ಆದರೂ ಕೂಡಲೇ ಜಾಮೀನು ಆಗುತ್ತದೆ. ಈ ರೀತಿ ಕೇಸ್ ಆದರೂ ಅವರಿಗೆ ಸಂಘಟನೆಯ ಬೆಂಬಲ ಇದೆ, ರಾಜಕೀಯ ರಕ್ಷಣೆಯೂ ಇದೆ ಎಂದರು.
ಬಜಪೆ ಚಲೋ ವಿಚಾರದಲ್ಲಿ ಪೊಲೀಸರು ಸ್ಟ್ರಿಕ್ಟ್ ಆಗಿ ಇರಬೇಕಾಗಿತ್ತು. ಈಗಾಗಲೇ ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ. ಮಂಗಳೂರು, ಉಡುಪಿ, ಶಿವಮೊಗ್ಗಕ್ಕೆ ರಚನೆ ಮಾಡಲು ಆದೇಶ ಆಗಿದೆ. ಎಲ್ಲಾ ಕಾನೂನು ಬಾಹಿರ ಚಟುವಟಿಕೆಗೆ ಇತಿಶ್ರೀ ಹಾಡುತ್ತೇವೆ. ಏನು ಮಾಡಬೇಕು ಆ ಕ್ರಮ ಕೈಗೊಳ್ಳುತ್ತೇವೆ ಎಂದರು. ಕೋಮುಗಲಭೆ, ಕೋಮುಭಾವನೆಯನ್ನು ಕೆರಳಿಸುವವರು ಅಪರಾಧಿ ಚಟುವಟಿಕೆಯಲ್ಲಿ ಭಾಗಿಯಾದವರು. ಯಾವುದೇ ಸಂಘಟನೆಯನ್ನು ಬ್ಯಾನ್ ಮಾಡುವುದಕ್ಕೆ ನಮಗೆ ಅಧಿಕಾರವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ ಕುಸಿತ ವಿಚಾರಕ್ಕೆ ಮಾತನಾಡಿದ ಅವರು, ಜನರು ಅಭಿವೃದ್ಧಿ ಮಾಡುವಾಗ ಪ್ರಕೃತಿ ಜೊತೆ ಎಚ್ಚರಿಕೆಯಿಂದ ಇರುವುದಿಲ್ಲ. ಇದು ಸರಕಾರದ ಸಾರ್ವಜನಿಕರ ಜವಾಬ್ದಾರಿ. ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿ ಎಚ್ಚರಿಕೆ ನೀಡಿರುತ್ತೇವೆ. ಆದರೆ ಅವರನ್ನು ಶಿಫ್ಟ್ ಮಾಡುವುದಕ್ಕೆ ಅವರ ಒಪ್ಪಿಗೆ ಬೇಕು. ನಿರ್ದಿಷ್ಟವಾಗಿ ಯಾವ ಗುಡ್ಡ ಕುಸಿಯುತ್ತದೆ ಎಂದು ಹೇಳಲು ಆಗುವುದಿಲ್ಲ. ಹೀಗಿದ್ದಾಗ ಯಾರನ್ನ ಎಲ್ಲಿಗೆ ಎಂದು ಸ್ಥಳಾಂತರ ಮಾಡುವುದು. ಗುಡ್ಡ ಕುಸಿತ ಬಗ್ಗೆ ಅಷ್ಟು ಸ್ಪಷ್ಟತೆ ಇರುವುದಿಲ್ಲ. ಪರಿಹಾರ ವಂಚಿತರಿಗೆ ಮಾನದಂಡಗಳ ಆಧಾರದ ಮೇಲೆ ಶೀಘ್ರ ಪರಿಹಾರ ನೀಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇದನ್ನು ಓದಿ: