ಅಪರಾಧ ಕೃತ್ಯಗಳನ್ನು ಹತ್ತಿಕ್ಕುವ ಹೊಣೆ ನನ್ನದು ಎಂದ ಹೊಸ ಕಮಿಷನರ್
ಮಿಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಹತ್ತಿಕ್ಕಲು ಜಂಟಿಯಾಗಿ ಕಾರ್ಯಾಚರಿಸಲಾಗುವುದು ಎಂದು ಎಂದು ನೂತನ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ.ತಿಳಿಸಿದ್ದಾರೆ.
ಬೆಂಗಳೂರು: ಕಮಿಷನರೇಟ್ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಹತ್ತಿಕ್ಕಲು ಜಂಟಿಯಾಗಿ ಕಾರ್ಯಾಚರಿಸಲಾಗುವುದು ಎಂದು ಎಂದು ನೂತನ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ.ತಿಳಿಸಿದ್ದಾರೆ.
ಶನಿವಾರ ಕಮಿಷನರ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಬ್ಬರೂ ಅಧಿಕಾರಿಗಳು, ಜಿಲ್ಲೆಯ ನಗರ ಆಗಿರಲಿ, ಗ್ರಾಮಾಂತರ ಭಾಗವೇ ಆಗಿರಲಿ, ಎಲ್ಲಿ, ಯಾವುದೇ ರೀತಿಯ ಅಪರಾಧ ಕೃತ್ಯ ನಡೆದಾಗ ಅಥವಾ ಅಕ್ರಮ ಚಟುವಟಿಕೆಗಳು ನಡೆದಾಗ ಅದನ್ನು ಜಂಟಿಯಾಗಿ ನಿಭಾಯಿಸಲಿದ್ದೇವೆ. ಕ್ರಿಮಿನಲ್ಗಳು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಎಸಗಿದರೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಯಾವುದೇ ಅಪರಾಧ ಪ್ರಕರಣಗಳು ನಡೆದಾಗಲೂ ಹಿಂದೆಯೂ ತನಿಖೆ ಆಗಿದೆ. ಮುಂದೆಯೂ ಆಗಲಿದೆ. ನಮ್ಮ ಕೆಲಸವೇ ಅದು. ಅದನ್ನು ನಾವು ನಿಭಾಯಿಸುತ್ತೇವೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ, ಶಾಂತಿ ಸೌಹಾರ್ದವನ್ನು ಮತ್ತೆ ಹಿಂದಿನ ಲಯಕ್ಕೆ ತರುವುದು ನಮ್ಮ ಮೊದಲ ಆದ್ಯತೆ. ಆ ಕೆಲಸವನ್ನು ಸರಿಯಾಗಿ ನಿಭಾಯಿಸಿ, ಬಳಿಕ ಇತರ ವಿಷಯಗಳಿಗೆ ಗಮನಹರಿಸ ಲಾಗುವುದು. ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ಕಚೇರಿಗೆ ಭೇಟಿ ನೀಡಿ ತಿಳಿಸಬಹುದು ಎಂದರು.
ಕರಾವಳಿಯ ಜನರು ಬುದ್ಧಿವಂತರು. ಉಳಿದ ಜಿಲ್ಲೆಯವರಿಗಿಂತ ಹೆಚ್ಚು ಕಾನೂನಿನ ಅರಿವು ಇಲ್ಲಿನವರಲ್ಲಿದೆ. ಪ್ರತಿ ಅಪರಾಧಕ್ಕೂ ತಕ್ಕುದಾದ ಶಿಕ್ಷೆ ಕಾನೂನಿನಲ್ಲಿ ತಿಳಿಸಲಾಗಿದೆ. ಆಯಾ ಅಪರಾಧಗಳಿಗೆ ತಕ್ಕನಾದ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
ಪ್ರಚೋದನೆ ಸಲ್ಲದು
ವಾಕ್ ಸ್ವಾತಂತ್ರ್ಯ ಮತ್ತು ಅಪರಾಧ ಕೃತ್ಯಗಳಿಗೆ ಜನರನ್ನು ಪ್ರಚೋದಿಸುವ ಮಾತುಗಳು-ಎರಡೂ ಒಂದೇ ಅಲ್ಲ. ಪ್ರಚೋದನೆ ನೀಡಿದರೆ ಅದಕ್ಕೆ ಶಿಕ್ಷೆ ವಿಧಿಸಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದರೆ ಇಲಾಖೆ ಸೂಕ್ತ ಕ್ರಮ ವಹಿಸಲಿದೆ. ಯಾವುದೇ ಭಾಷಣ, ಮಾತುಗಳು ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವಂತಿರಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗಳ ಜತೆ ಉಸ್ತುವಾರಿ ಸಚಿವರು ನಮ್ಮ ಜತೆ ಚರ್ಚಿಸಿದ್ದು, ಸಲಹೆ ಸೂಚನೆ ನೀಡಿದ್ದಾರೆ ಎಂದವರು ಹೇಳಿದರು. ಡಿಸಿಪಿ ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.
ಹೊಣೆ ನನ್ನದು : ಕಮಿಷನರ್
ಪೊಲೀಸ್ ಇಲಾಖೆಯ ತಳಹಂತದ ವ್ಯವಸ್ಥೆಯನ್ನು ಬದಲಾಯಿಸುವಂತೆ ಆಗ್ರಹ ಕೇಳಿ ಬರುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಕಮಿಷನರ್ ಸುಧೀರ್ ರೆಡ್ಡಿ, ಪೊಲೀಸ್ ಸಿಬಂದಿ ಎಲ್ಲರೂ ಒಳ್ಳೆಯವರು. ಯಾರಾದರೂ ತಮ್ಮ ಹೊಣೆ ನಿರ್ವಹಿಸಲು ವಿಫಲರಾಗಿದ್ದಾರೆ ಎಂದರೆ ಅದರ ಜವಾಬ್ದಾರಿ ನನ್ನದು. ನನ್ನ ಮಾರ್ಗದರ್ಶನದಲ್ಲಿ ಅವರನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುವೆ ಎಂದರು.
“ಆರೋಪಿಗಳಿಗೆ ರಕ್ಷಣೆ, ನೆರವು ನೀಡಿದರೆ ಶಿಕ್ಷೆ’
ಯಾವುದೇ ಪ್ರಕರಣದಲ್ಲಿ ಆರೋಪಿ ಯಾದವನಿಗೆ ಮನೆಯಲ್ಲಿ ರಕ್ಷಣೆ ನೀಡುವುದು, ಪರಾರಿಯಾಗಲು ವಾಹನ ನೀಡುವುದು, ಊಟ, ಹಣಕಾಸಿನ ಸಹಕಾರ ನೀಡುವುದೂ ಕಾನೂನಿನಡಿ ಅಪರಾಧವೇ ಆಗಿದ್ದು, ಅಂತಹವರನ್ನೂ ಶಿಕ್ಷಗೆ ಗುರಿಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಹಾಯ ಮಾಡುವ ಸಂಬಂಧಿಕರು, ಸ್ನೇಹಿತರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು ಆರೋಪಿಗಳಿಗೆ ಸಹಾಯ ಮಾಡುವವರು ಇದನ್ನು ತಿಳಿದುಕೊಳ್ಳಬೇಕು. ಯಾರಾದರೂ ಅಪರಾಧಿಗಳಿಗೆ ರಕ್ಷಣೆ ನೀಡುವುದು ಕಂಡು ಬಂದರೆ ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು ಎಂದು ಅವರು ವಿನಂತಿಸಿದ್ದಾರೆ.
ಧೈರ್ಯದಿಂದ ಕರ್ತವ್ಯ ನಿಭಾಯಿಸಿ: ಗುಂಡೂರಾವ್
ಇದಕ್ಕೂ ಮೊದಲು ಜಿಲ್ಲಾಧಿಕಾರಿಯನ್ನು ಒಳಗೊಂಡಂತೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಿ. ಧೈರ್ಯದಿಂದ ಕರ್ತವ್ಯ ನಿರ್ವಹಿಸಿ. ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಪ್ರಭಾರ ಡಿ.ಸಿ. ಡಾ| ಆನಂದ್ ಕೆ., ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್.ಪಿ. ಡಾ| ಅರುಣ್ ಕೆ., ಸಭೆಯಲ್ಲಿದ್ದರು.
ಇದನ್ನು ಓದಿ: