Back To Top

 ಲಕ್ಕಿ ಭಾಸ್ಕರ ಸಿನಿಮಾ ನಾಯಕನಂತೆ ಶ್ರೀಮಂತನಾಗಲು ಬ್ಯಾಂಕ್ ನಲ್ಲಿ ಅಡ ಇರಿಸಿದ್ದ ಚಿನ್ನಾಭರಣ ಕದ್ದ ಕಳ್ಳ
May 18, 2025

ಲಕ್ಕಿ ಭಾಸ್ಕರ ಸಿನಿಮಾ ನಾಯಕನಂತೆ ಶ್ರೀಮಂತನಾಗಲು ಬ್ಯಾಂಕ್ ನಲ್ಲಿ ಅಡ ಇರಿಸಿದ್ದ ಚಿನ್ನಾಭರಣ ಕದ್ದ ಕಳ್ಳ

ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲಿ ಗ್ರಾಹಕರು ಅಡ ಇರಿಸಿದ್ದ ಚಿನ್ನಾಭರಣವನ್ನು ಕದ್ದು ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟು ₹2 ಕೋಟಿಗೂ ಅಧಿಕ ಸಾಲ ಪಡೆದು ‘ಲಕ್ಕಿ ಭಾಸ್ಕರ’ ಸಿನಿಮಾ ನಾಯಕನಂತೆ ದಿಢೀರ್‌ ಶ್ರೀಮಂತನಾಗಲು ಯತ್ನಿಸಿದ ಬ್ಯಾಂಕ್‌ ಅಧಿಕಾರಿಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲಿ ಗ್ರಾಹಕರು ಅಡ ಇರಿಸಿದ್ದ ಚಿನ್ನಾಭರಣವನ್ನು ಕದ್ದು ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟು ₹2 ಕೋಟಿಗೂ ಅಧಿಕ ಸಾಲ ಪಡೆದು ‘ಲಕ್ಕಿ ಭಾಸ್ಕರ’ ಸಿನಿಮಾ ನಾಯಕನಂತೆ ದಿಢೀರ್‌ ಶ್ರೀಮಂತನಾಗಲು ಯತ್ನಿಸಿದ ಬ್ಯಾಂಕ್‌ ಅಧಿಕಾರಿಯೊಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಗರದ ಕ್ಯಾಥೊಲಿಕ್‌ ಸಿರಿಯನ್‌ ಬ್ಯಾಂಕ್‌ನ ಚಿನ್ನಾಭರಣ ಸಾಲ ವಿಭಾಗದ ಅಧಿಕಾರಿ ಟಿ.ಪಿ. ಸಂಜಯ್‌ (33) ಬಂಧಿತ ಆರೋಪಿ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಿಂದ ಚಿನ್ನಾಭರಣ ಕದ್ದು, ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಖಾಸಗಿ ಫೈನಾನ್ಸ್‌ ಕಂಪನಿಯಲ್ಲಿ ಅಡವಿಟ್ಟಿದ್ದರು. ಹೀಗೆ ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದ 3 ಕೆ.ಜಿ 643 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉದ್ಯೋಗದಲ್ಲಿದ್ದ ಬ್ಯಾಂಕಿನಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ 2 ಕೆ.ಜಿ. 744 ಗ್ರಾಂ ನಕಲಿ ಚಿನ್ನಾಭರಣವನ್ನು ತಾನೇ ಅಡವಿಟ್ಟುಕೊಂಡು ₹1.52 ಕೋಟಿ ಸಾಲ ಪಡೆದಿದ್ದ ಸಂಗತಿ ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ. ‘ಆರೋಪಿ 2024ರ ಅಕ್ಟೋಬರ್‌ನಿಂದ ಕ್ಯಾಥೊಲಿಕ್‌ ಸಿರಿಯನ್‌ ಬ್ಯಾಂಕ್‌ನ ಚಿನ್ನ ಸಾಲದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಚಿನ್ನಾಭರಣವನ್ನು ಪರಿಶೀಲಿಸಿ ಅಡವಿಟ್ಟುಕೊಂಡು ದಾಖಲೆಗಳನ್ನು ಸೃಜಿಸುವುದು ಆರೋಪಿಯ ಜವಾಬ್ದಾರಿಯಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡು ಅಸಲಿ ಚಿನ್ನಾಭರಣವನ್ನು 6 ತಿಂಗಳಲ್ಲಿ ಹಂತಹಂತವಾಗಿ ಕಳವು ಮಾಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಳವು ಮಾಡಿದ ಚಿನ್ನವನ್ನು ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಖಾಸಗಿ ಫೈನಾನ್ಸ್‌ನಲ್ಲಿ ತಂದೆ, ತಾಯಿ ಹಾಗೂ ತನ್ನ ಹೆಸರಿನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಆನ್‌ಲೈನ್‌ ಜೂಜು ಹಾಗೂ ಮೋಜು- ಮಸ್ತಿಗೆ ಬಹುತೇಕ ಹಣವನ್ನು ಖರ್ಚು ಮಾಡಿದ್ದಾರೆ. ಗೋವಾ ಮತ್ತಿತರ ಕಡೆ ಪ್ರವಾಸಕ್ಕೆ ತೆರಳಿ ದುಂದುವೆಚ್ಚ ಮಾಡಿದ್ದಾರೆ’ ಎಂದು ವಿವರಿಸಿದರು. ‘ಬ್ಯಾಂಕ್‌ನ ಅಧಿಕಾರಿಗಳು ಏಪ್ರಿಲ್‌ನಲ್ಲಿ ಚಿನ್ನಾಭರಣ ಸಾಲದ ಲೆಕ್ಕ ಪರಿಶೋಧನೆ ನಡೆಸಿದಾಗ ಗ್ರಾಹಕರು ಅಡವಿಟ್ಟಿದ್ದ ಚಿನ್ನ ಕಳವಾಗಿರುವುದು ಗೊತ್ತಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ಇತರ ಅಧಿಕಾರಿಗಳು ಕೆ.ಟಿ.ಜೆ ನಗರ ಠಾಣೆಯ ಮೆಟ್ಟಿಲೇರಿದ್ದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣವನ್ನು ಬೇರೆಡೆ ಅಡವಿಟ್ಟದ್ದು ಗೊತ್ತಾಯಿತು. ನ್ಯಾಯಾಲಯದ ಅನುಮತಿ ಪಡೆದು ಆಯಾ ಬ್ಯಾಂಕ್‌ಗಳು ಮತ್ತು ಫೈನಾನ್ಸ್‌ ಕಂಪನಿಗಳಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ಬಿಸಿಎ ಪದವೀಧರನಾಗಿರುವ ಆರೋಪಿ ಸಂಜಯ್‌, ಇದಕ್ಕಿಂತ ಮೊದಲು ಖಾಸಗಿ ಫೈನಾನ್ಸ್‌ ಕಂಪನಿಗಳಲ್ಲಿ ಚಿನ್ನಾಭರಣ ಸಾಲ ಅಡವಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಆರೋಪಿಗೆ ಕ್ಯಾಥೊಲಿಕ್‌ ಸಿರಿಯನ್‌ ಬ್ಯಾಂಕ್‌ನಲ್ಲಿ ಉದ್ಯೋಗ ದೊರೆತಿತ್ತು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಾಭರಣ ಅಡ ಇರಿಸಿಕೊಂಡು ಸಾಲ ವಿತರಿಸಿದ ಬಗ್ಗೆ ಬ್ಯಾಂಕ್‌ ಮೆಚ್ಚುಗೆ ಸೂಚಿಸಿತ್ತು. ಕೃತ್ಯದ ಬಗ್ಗೆ ಅನುಮಾನ ಮೂಡದಂತೆ ಆರೋಪಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ:

https://infomindz.in/geometry-pub-nalli-cash-counter-odedu-hana-dochi-kalla-parari/
Prev Post

ಸಿಎಂ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಶವವಾಗಿ ಪತ್ತೆ

Next Post

ಕುತಂತ್ರಿ ರಾಷ್ಟ್ರ ಪಾಕಿಸ್ತಾನದಿಂದ ಸಿಂಧೂ ನದಿ ನೀರು ಬಿಡುವಂತೆ ಭಾರತಕ್ಕೆ ಬೇಡಿಕೆ

post-bars

Leave a Comment

Related post