ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪ್ರಮುಖ ಅಧಿಕಾರಿಗಳ ಹೆಸರನ್ನು ಪ್ರಕಟ
ನವದೆಹಲಿ: ಭಾರತದ ಆಪರೇಷನ್ ಸಿಂದೂರ(operation Sindoor) ಕಾರ್ಯಾಚರಣೆಲ್ಲಿ ಹತರಾದ ಭಯೋತ್ಪಾದಕರ ಅಂತ್ಯಕ್ರಿಯೆಯ(terrorists funeral) ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನಿ ಸೇನಾ ಸಿಬ್ಬಂದಿ ಮತ್ತು ಪಂಜಾಬ್ ಪ್ರಾಂತ್ಯದ ಪ್ರಮುಖ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಭಾರತ ಬಹಿರಂಗಪಡಿಸಿದೆ.
ಲಾಹೋರ್ ಬಳಿಯ ಮುರೀದ್ಕೆಯಲ್ಲಿ ಸಾವನ್ನಪ್ಪಿದ 3 ಪುರುಷರ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವವನ್ನು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್(Hafiz Abdul Rauf) ವಹಿಸಿದ್ದ.
ಪಾಕಿಸ್ತಾನವು ಯಾವುದೇ ರೀತಿಯ ಭಯೋತ್ಪಾದನೆಯನ್ನು ಆಶ್ರಯಿಸುವುದಿಲ್ಲ ಅಥವಾ ಪ್ರಾಯೋಜಿಸುವುದಿಲ್ಲ ಎಂದು ಹೇಳಿಕೊಂಡು ಬಂದಿತ್ತು. ಆದರೆ ಭಾರತೀಯ ಸಶಸ್ತ್ರ ಪಡೆಗಳು ಹಂಚಿಕೊಂಡ ಚಿತ್ರಗಳ ಪ್ರಕಾರ, ಅನೇಕ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವುದು ಜಗಜ್ಜಾಹೀರವಾಗಿದೆ.
ಅಂತ್ಯಕ್ರಿಯೆಯ ಕೆಲವೇ ಕ್ಷಣಗಳ ನಂತರ, ಪಾಕಿಸ್ತಾನ ಸೇನಾ ಸಿಬ್ಬಂದಿ ಮುರಿಡ್ಕೆಯಲ್ಲಿ ಪಾಕಿಸ್ತಾನ ಧ್ವಜದಲ್ಲಿ ಸುತ್ತಿದ ಭಯೋತ್ಪಾದಕರ ಶವಪೆಟ್ಟಿಗೆಯನ್ನು ಹೊತ್ತೊಯ್ಯುತ್ತಿರುವ ವಿಡಿಯೊ ಕೂಡ ವೈರಲ್ ಆಗಿದೆ.
ಶುಕ್ರವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸಮವಸ್ತ್ರ ಧರಿಸಿದ ಪಾಕಿಸ್ತಾನಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿಗಳು ಹತ್ಯೆಗೀಡಾದ ಭಯೋತ್ಪಾದಕರ ಶವಪೆಟ್ಟಿಗೆಯ ಹಿಂದೆ ಪ್ರಾರ್ಥಿಸುತ್ತಿರುವ ಫೋಟೊವನ್ನು ಪ್ರದರ್ಶಿಸಿ ಭಯೋತ್ಪಾದಕರಿಗೆ ಅಂತ್ಯಕ್ರಿಯೆ ನೀಡುವುದು ಪಾಕಿಸ್ತಾನದ ಅಭ್ಯಾಸವಾಗಿರಬಹುದು ಎಂದು ಹೇಳಿದ್ದರು.
ಇದೀಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪ್ರಮುಖ ಅಧಿಕಾರಿಗಳ ಹೆಸರನ್ನು ಪ್ರಕಟ ಮಾಡಲಾಗಿದೆ.
ಲೆಫ್ಟಿನೆಂಟ್ ಜನರಲ್ ಫಯಾಜ್ ಹುಸೇನ್ ಷಾ, ಲಾಹೋರ್ನ IV ಕಾರ್ಪ್ಸ್ ಕಮಾಂಡರ್.
ಲಾಹೋರ್ನ 11 ನೇ ಪದಾತಿ ದಳದ ವಿಭಾಗದ ಮೇಜರ್ ಜನರಲ್ ರಾವ್ ಇಮ್ರಾನ್ ಸರ್ತಾಜ್.
ಬ್ರಿಗೇಡಿಯರ್ ಮೊಹಮ್ಮದ್ ಫುರ್ಕಾನ್ ಶಬ್ಬೀರ್.
ಡಾ. ಉಸ್ಮಾನ್ ಅನ್ವರ್, ಪಂಜಾಬ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್
ಪಂಜಾಬ್ ಪ್ರಾಂತೀಯ ವಿಧಾನಸಭೆಯ ಸದಸ್ಯರಾದ ಮಲಿಕ್ ಸೊಹೈಬ್ ಅಹ್ಮದ್ ಭೇರ್ತ್.