Back To Top

 ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೆಲ್ಲ ಕರೆಯಿಸಿಕೊಳ್ಳುವ ಕೊಡಗು ಪ್ರವಾಸಿಗರ ಕಣ್ಮನ ಸೆಳೆಯುವ ಬಹಳ ಅಚ್ಚುಮೆಚ್ಚಿನ ಸ್ಥಳವಾಗಿದೆ. ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರು ಕೊಡಗಿತ್ತ ಬರಲಾರಂಭಿಸಿದ್ದು, ವಾರಾಂತ್ಯದ ದಿನಗಳಲ್ಲಿ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿರುವುದು ಕಾಣಿಸುತ್ತಿದೆ.

🖋️ಚಂದನ್ ನಂದರಬೆಟ್ಟು

ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದೆಲ್ಲ ಕರೆಯಿಸಿಕೊಳ್ಳುವ ಕೊಡಗು ಪ್ರವಾಸಿಗರ ಕಣ್ಮನ ಸೆಳೆಯುವ ಬಹಳ ಅಚ್ಚುಮೆಚ್ಚಿನ ಸ್ಥಳವಾಗಿದೆ. ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರು ಕೊಡಗಿತ್ತ ಬರಲಾರಂಭಿಸಿದ್ದು, ವಾರಾಂತ್ಯದ ದಿನಗಳಲ್ಲಿ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ತುಂಬಿರುವುದು ಕಾಣಿಸುತ್ತಿದೆ. ಜಗತ್ತಿನ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ೭ನೇ ಸ್ಥಾನದಲ್ಲಿದೆ. ಪ್ರವಾಸೋದ್ಯಮದಲ್ಲಿ ಜಿಲ್ಲೆಯ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಇದರ ಸದುಪಯೋಗಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಪ್ರವಾಸೋದ್ಯಮದ ಮೂಲಕ ಕೊಡಗಿನ ಅಭಿವೃದ್ಧಿ ಮತ್ತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಲೆನಾಡಿನ ಪುಟ್ಟ ಜಿಲ್ಲೆ ಕೊಡಗು ಪ್ರಾಕೃತಿಕ ಸಂಪತ್ತಿನಿಂದ ಶ್ರೀಮಂತವಾಗಿದೆ. ಇಲ್ಲಿನ ಅದ್ಭುತ ಪರಿಸರದಿಂದಾಗಿ ದಕ್ಷಿಣದ ಕಾಶ್ಮೀರ ಎನ್ನುವ ಹೆಸರೂ ಇದೆ. ಹಚ್ಚ ಹಸಿರಿನ ಕಾಡು, ಧುಮ್ಮಿಕ್ಕಿ ಹರಿಯುವ ಜಲಧಾರೆ, ನಿಸರ್ಗ ರಮಣೀಯ ತಾಣಗಳು, ಹಸಿರು ಹೊದ್ದ ಬೆಟ್ಟಗಳು…ಹೀಗೆ ಅನೇಕ ಆಕರ್ಷಣೆಗಳು ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತಿದೆ.ದೇಶ ವಿದೇಶದ ಪ್ರವಾಸಿಗರು ಇಲ್ಲಿಯ ಸೌಂದರ್ಯ ಆಸ್ವಾದಿಸಲು ಬರುತ್ತಿದ್ದಾರೆ. ಕಾಫಿ ಪ್ರಮುಖ ಬೆಳೆಯಾಗಿರುವ ಜಿಲ್ಲೆಯಲ್ಲಿ ಇತ್ತೀಚಿನ ದಶಕಗಳಿಂದ ಪ್ರವಾಸೋದ್ಯಮ ಕೊಡಗಿನ ಆರ್ಥಿಕ ಬೆನ್ನೆಲುಬಾಗಿ ಬದಲಾಗುತ್ತಿದೆ. ೨೦೧೮ರ ನಂತರದ ಮೂರು ವರ್ಷಗಳಲ್ಲಿ ನಿರಂತರ ಪ್ರಾಕೃತಿಕ ವಿಕೋಪ, ಇದರ ಬೆನ್ನಲ್ಲೇ ಕಾಡಿದ ಕೋವಿಡ್-೧೯ ಪರಿಣಾಮಕ್ಕೆ ಜಿಲ್ಲೆಯ ಪ್ರವಾಸೋದ್ಯಮ ಸ್ವಲ್ಪ ನಲುಗಿದರೂ ಇದೀಗ ಚೇತರಿಕೆಯ ಹಾದಿಯಲ್ಲಿದೆ.
ಭೌಗೋಳಿಕ ಮತ್ತು ಹವಾಮಾನದ ಕಾರಣದಿಂದ ಕೊಡಗಿನಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ ಸಾಧ್ಯವಾಗದ ಮಾತು. ಏಲಕ್ಕಿ, ಕಾಫಿ, ಜೇನು, ಭತ್ತ, ಕರಿಮೆಣಸು.. ಹೀಗೆ ಕೃಷಿ ಪ್ರಧಾನವಾಗಿದ್ದ ಜಿಲ್ಲೆಯಲ್ಲಿ ಬದಲಾದ ಕಾಲಘಟ್ಟದಲ್ಲಿ ವ್ಯವಸಾಯವೂ ಲಾಭದಾಯಕ ಎನ್ನುವ ಅಭಿಪ್ರಾಯಕ್ಕೆ
ಬರಲಾಗುತ್ತಿದೆ.

ಅಭಿವೃದ್ಧಿ ಕಾರ್ಯಗಳು ಈಗಾಗಲೇ ಬಹಳಷ್ಟು ಪ್ರವಾಸಿ ಕೇಂದ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಹಣ ಬಿಡುಗಡೆ ಮಾಡಲಾಗಿದ್ದು ಮಡಿಕೇರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ, ಮಡಿಕೇರಿಯ ರಾಜಾಸೀಟ್ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ, ಸೋಮವಾರಪೇಟೆ ತಾಲೂಕು, ಮಲ್ಲಳ್ಳಿ ಜಲಪಾತ ಪ್ರದೇಶದಲ್ಲಿ ಬಾಕಿ ಇರುವ ಮೆಟ್ಟಿಲುಗಳ ನಿರ್ಮಾಣ, ರೈಲಿಂಗ್ಸ್, ಪಾರ್ಕಿಂಗ್, ಮಳಿಗೆ ಮುಂತಾದ ಸೌಲಭ್ಯಗಳು, ದುಬಾರೆ ಬಳಿ ಕಾವೇರಿ ನದಿ ತೀರದಲ್ಲಿ ಪಾರ್ಕಿಂಗ್ ಸೌಲಭ್ಯ ಅಭಿವೃದ್ಧಿ, ತಲಕಾವೇರಿ ಬಳಿ ಕೆಂಪುರಾಶಿ ಮೊಟ್ಟೆಯಿಂದ ಮಂಟಕಲ್ ಶಾಲೆವರೆಗೆ ೨ ಕಿ.ಮೀ ರಸ್ತೆ ಅಭಿವೃದ್ಧಿ, ಮಡಿಕೇರಿ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ ನಿರ್ಮಾಣ, ಮಡಿಕೇರಿ ತಾಲೂಕು ನಾಲ್ಕುನಾಡು ಅರಮನೆಗೆ ಸಂಪರ್ಕ ರಸ್ತೆ ಅಭಿವೃದ್ಧಿ, ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿಯಲ್ಲಿ ತಪೋವನ ಮನೆಹಳ್ಳಿ ಶ್ರೀ ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಅಜ್ಜಯ್ಯ ವೀರಭದ್ರ ಮಠಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ.
ಮಡಿಕೇರಿ ರಾಜಾಸೀಟಿಗೆ ತೆರಳುವ ರಸ್ತೆಗೆ ಪಾತ್‌ವೇ, ರೈಲಿಂಗ್ನಿ ರ್ಮಾಣ ಕಾಮಗಾರಿ, ಮಡಿಕೇರಿಯ ರಾಜಾಸೀಟು ಬಳಿ ಕೂರ್ಗ್ ವಿಲೇಜ್, ಕೊಡಗು ಶಾಪಿಂಗ್ ಕೇಂದ್ರ ಕಾಮಗಾರಿ ಅಬ್ಬಿ ಫಾಲ್ಸ್ ಪ್ರದೇಶದಲ್ಲಿ ೩೦೦ ಮೀ. ಕಾಂಕ್ರಿಟ್ ರಸ್ತೆ, ಪಾರ್ಕಿಂಗ್ ಸೌಲಭ್ಯ ಹಾಗೂ ಮಳೆನೀರು ಚರಂಡಿ ನಿರ್ಮಾಣ, ಮಾಂದಲಪಟ್ಟಿ, ಕಾಲೂರು ರಸ್ತೆ ದುರಸ್ತಿ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿ ೧೦೦ ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು ಪಾರ್ಕಿಂಗ್ ಲಾಟ್ ಅಭಿವೃದ್ಧಿ, ದುಬಾರೆಯಲ್ಲಿ ಕಾವೇರಿ ನದಿ ಬಳಿ ಸೋಪಾನಕಟ್ಟೆ ಮತ್ತು ಜಟ್ಟಿ ನಿರ್ಮಾಣ, ದುಬಾರೆಯಲ್ಲಿ ೨ನೇ ಹಂತದ ಪಾರ್ಕಿಂಗ್ ನಿರ್ಮಾಣ, ಕುಶಾಲನಗರ ಸೋಮೇಶ್ವರ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಕಾಮಗಾರಿಗಳೂ ಪ್ರಗತಿಯಲ್ಲಿದೆ.
ಕೊಡಗು ಜಿಲ್ಲೆಯನ್ನೊಳಗೊಂಡÂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಸಂಬÀಧ ಸ್ಥಳೀಯರಿಗೆ ಜೀವನ ನಿರ್ವಹಣೆಗಾಗಿ ಅನುಕೂಲ ಕಲ್ಪಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರವಾಸಿ ತಾಣಗಳ ಬಳಿ ಪ್ರವಾಸಿಗರಿಗೆ ಆತಿಥ್ಯ ಸೇವೆ ಒದಗಿಸಲು ಮುಂದೆ ಬರುವ ಮನೆ ಮಾಲೀಕರುಗಳಿಗೆ ಹೋಂ ಸ್ಟೇ ಯೋಜನೆಯಡಿ ಇಲಾಖೆಯಿಂದ ನೋಂದಣಿ ಮಾಡಲಾಗುತ್ತಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೦-೨೬ರ ಅಡಿಯಲ್ಲಿ ಕೊಡಗು ಪೂರ್ಣ ಜಿಲ್ಲೆಯನ್ನು ಆದ್ಯತಾ ಪ್ರವಾಸಿ ತಾಣವನ್ನಾಗಿ ಗುರುತಿಸಲಾಗಿದೆ. ಈ ನೀತಿ ಅನ್ವಯ ವಿವಿಧ ರೀತಿಯ ೨೬ ಪ್ರವಾಸಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬರುವ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಸಹಾಯಧನ, ಹಾಗೂ ರಿಯಾಯಿತಿಗಳನ್ನು ನೀಡಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ.

ಪ್ರವಾಸಿಗರನ್ನು ಕೊಡಗಿನ ಮಂಜಿನ ವಾತಾವರಣ ಒಂದೆಡೆ ಸೆಳೆದರೆ, ಮತ್ತೊಂದೆಡೆ ಇಲ್ಲಿರುವ ನಿಸರ್ಗ ನಿರ್ಮಿತ ತಾಣಗಳಾದ ಬೆಟ್ಟಗುಡ್ಡಗಳು, ಜಲಪಾತಗಳು, ಅರಣ್ಯಗಳು, ಪಾರಂಪರಿಕ ತಾಣಗಳಾದ ಅರಮನೆ, ಕೋಟೆ, ದೇಗುಲಗಳು, ಚರ್ಚ್, ಮಸೀದಿ, ಜಲಾಶಯಗಳು, ನದಿತೊರೆಗಳು ಹೀಗೆ ಹತ್ತಾರು ಸ್ಥಳಗಳು ಗಮನಾರ್ಹವಾಗಿವೆ. ಹಾಸನ, ಮೈಸೂರು, ದಕ್ಷಿಣಕನ್ನಡ ಹಾಗೂ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕಾರಣ ಎಲ್ಲೆಡೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಲೇ ಇರುತ್ತಾರೆ.

ಪಟ್ಟಣದಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುವವರು, ಸದಾ ಕೆಲಸದ ಒತ್ತಡದಲ್ಲಿ ಕಳೆದು ಹೋದವರು ಒಂದಷ್ಟು ಸಮಯವನ್ನು ಸುಂದರ ಪರಿಸರದಲ್ಲಿ ಆನಂದದಲ್ಲಿ ಕಳೆದು ಹೋಗೋಣವೆಂದು ಕೊಡಗಿನತ್ತ ಬರುವುದು ಮಾಮೂಲಿಯಾಗಿದೆ. ಹೀಗೆ ಬಂದವರು ಇಲ್ಲಿ ಲಭ್ಯವಿರುವ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಲ್ಲಿ ತಂಗಿದ್ದು, ಇಲ್ಲಿನ ಪ್ರವಾಸಿತಾಣಗಳನ್ನು ನೋಡಿಕೊಂಡು ಹಿಂತಿರುಗುತ್ತಾರೆ. ಹೀಗೆ ಬರುವವರು ಇಲ್ಲಿ ಇದ್ದಷ್ಟು ದಿನ ಖುಷಿಯಾಗಿ ಇರುವ ವಾತಾವರಣವನ್ನು ಕೊಡಗಿನ ಆಡಳಿತ ವ್ಯವಸ್ಥೆ ಸೃಷ್ಟಿಸಿಕೊಡಬೇಕಾಗುತ್ತದೆ. ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುವುದು ಇಲ್ಲಿನ ವಾತಾವರಣ ಮತ್ತು ನಿಸರ್ಗ ಸೌಂದರ್ಯವನ್ನು ಅನುಭವಿಸಲಷ್ಟೆ. ಹೀಗಾಗಿ ಮೂಲ ಸೌಲಭ್ಯವಿಲ್ಲದಿದ್ದರೂ ಹೆಚ್ಚಿನವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮೊದಲಿನಂತೆ ಕೊಡಗು ಈಗ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ. ಎಲ್ಲೆಡೆ ಹೇಗೆ ಅಭಿವೃದ್ಧಿಯಾಗಿದೆಯೋ, ಇಲ್ಲಿಯೂ ಹಾಗೆಯೇ ಆಗಿದೆ. ಮೊದಲಿಗೆ ಹೋಲಿಸಿದರೆ ಜನವಸತಿ ಪ್ರದೇಶಗಳು ಹೆಚ್ಚಾಗಿವೆ. ಬೆಟ್ಟಗುಡ್ಡ ಅದರಾಚೆಗೆ ತೋಟ, ಗದ್ದೆ ಬಯಲು ಸೇರಿದಂತೆ ಎಲ್ಲೆಡೆಯೂ ಕಟ್ಟಡಗಳು ತಲೆ ಎತ್ತಿವೆ.

ಅಭಿವೃದ್ಧಿಗೆ ಪೂರಕವಾದ ಕಾರ್ಯ ಅಗತ್ಯ

ಮೊದಲೆಲ್ಲ ಕೊಡಗನ್ನು ಕಾಫಿನಾಡು, ಕಿತ್ತಳೆ ನಾಡು ಎಂದೆಲ್ಲ ಕರೆಯುತ್ತಿದ್ದರು. ಈಗ ಕೃಷಿಗಿಂತ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಕಿತ್ತಳೆ ಮರೆಯಾಗುತ್ತಿದೆ. ಕಾಫಿಯಷ್ಟೇ ಉಳಿದುಕೊಂಡಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಕೂಲಿಕಾರ್ಮಿಕರು ಸೇರಿದಂತೆ ಹಲವು ಸಮಸ್ಯೆಗಳು ಕಾಫಿ ಬೆಳೆಗಾರರನ್ನು ಕಾಡುತ್ತಿದೆ. ಗದ್ದೆಯಂತು ಪಾಳು ಬೀಳುವಂತಾಗಿದೆ. ಭೂ ಪರಿವರ್ತನೆಗಳು ಹೆಚ್ಚಾಗುತ್ತಿವೆ. ನಿಧಾನವಾಗಿ ಕಾಂಕ್ರಿಟ್ ಕಾಡುಗಳು ತಲೆ ಎತ್ತುತ್ತಿವೆ. ಹೊರಗಿನ ಶ್ರೀಮಂತರಿಗೆ ಮೋಜಿನ ಮತ್ತು ಹಣ ಮಾಡುವ ತಾಣವಾಗುತ್ತಿದ್ದು, ಕಾಫಿ ತೋಟಗಳನ್ನು ಖರೀದಿ ಮಾಡಿ ಅದರ ನಡುವೆ ಹೋಂಸ್ಟೇ, ರೆಸಾರ್ಟ್ ನಿರ್ಮಾಣ ಮಾಡಿ ಹಣ ಸಂಪಾದಿಸುತ್ತಿದ್ದಾರೆ.
ಓದಿಕೊಂಡವರು ಕೆಲಸ ಅರಸಿ ಹೊರಗಡೆ ಹೋಗುತ್ತಿದ್ದಾರೆ. ಹೀಗಾಗಿ ಕಾಫಿ ತೋಟಗಳನ್ನು ಹೊರಗಿನವರು ನಿರ್ವಹಣೆ ಮಾಡಬೇಕಾದ ದುಸ್ಥಿತಿ ಬಂದಿದೆ. ಇದೆಲ್ಲದರ ನಡುವೆಯೂ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದು, ಆದಾಯ ಹರಿದು ಬರುತ್ತಿದೆ. ಆದರೆ ಅಭಿವೃದ್ಧಿ ಕಾರ್ಯ ಮಾಡದ ಕಾರಣ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಎಲ್ಲಾ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಸೂಚನಾ ಫಲಕ ಅಳವಡಿಸುವುದು, ತ್ಯಾಜ್ಯಗಳ ತೊಟ್ಟಿ, ಶೌಚಾಲಯ ನಿರ್ಮಿಸುವುದು, ಪ್ರವಾಸಿಗರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡುವುದು, ಮಾಹಿತಿ ಕೇಂದ್ರಗಳನ್ನು ಸ್ಥಾಪಿಸುವುದು, ಶೈಕ್ಷಣಿಕ ಪ್ರವಾಸ ಬರುವ ವಿದ್ಯಾರ್ಥಿಗಳು ತಂಗಲು ವ್ಯವಸ್ಥೆ ಕಲ್ಪಿಸುವುದು ಹೀಗೆ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಕಾರ್ಯ ಮಾಡಬೇಕಾಗಿದೆ.

ಪ್ರವಾಸಿ ಸ್ನೇಹಿ ವಾತಾವರಣ ಸೃಷ್ಟಿಯಾಗಲಿ
ಇವತ್ತಿಗೂ ಕೆಲವು ಪ್ರವಾಸಿತಾಣಗಳಿಗೆ ಸರಿಯಾದ ರಸ್ತೆಯೇ ಇಲ್ಲದಾಗಿದೆ. ಜತೆಗೆ ಮಾಹಿತಿ ನೀಡುವವರು ಇಲ್ಲವೇ ಇಲ್ಲ. ಹೀಗಾಗಿ ಪ್ರವಾಸಿಗರಿಗೆ ಅನಾನುಕೂಲವಾಗುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡುವತ್ತ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಹೊಸವರ್ಷಾಚರಣೆ, ಸರ್ಕಾರಿ ರಜೆಯ ಸಮಯದಲ್ಲಿ ಒಮ್ಮೆಗೆ ಜಿಲ್ಲೆಗೆ ದಂಡು ದಂಡಾಗಿ ಪ್ರವಾಸಿಗರು ಆಗಮಿಸಿದಾಗ ಅವರ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ. ಇನ್ನು ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದನ್ನು ತಡೆಯಬೇಕಿದೆ. ಜಿಲ್ಲೆಯ ಸಂಬಾರ ಪದಾರ್ಥಗಳು ಹೂ ಹಣ್ಣುಗಳು, ಗುಡಿ ಕೈಗಾರಿಕೆಗಳು, ತಿಂಡಿ ತಿನಿಸುಗಳು, ಹೋಂ ಮೇಡ್ ವೈನ್ ಗಳು ಜೇನು, ಇವುಗಳ ಸಿದ್ಧತೆ ಮತ್ತು ಮಾರಾಟವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಸದ್ಯಕ್ಕೆ ಬದಲಾದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನತೆ ಪ್ರವಾಸೋದ್ಯಮದಿಂದ ಒಂದು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಸರ್ಕಾರ ಒತ್ತು ನೀಡಬೇಕಾಗುತ್ತದೆ. ಜತೆಗೆ ವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಹೋಂಸ್ಟೇ ನಡೆಸುವ ಮಾಲೀಕರು ಸೇರಿದಂತೆ ಎಲ್ಲರೂ ಪ್ರವಾಸಿ ಸ್ನೇಹಿಯಾಗಿ ನಡೆದುಕೊಳ್ಳುವ ಅಗತ್ಯವಿದೆ. ಇದು ಆದಷ್ಟು ಶೀಘ್ರವಾಗಿ ಸಾಧ್ಯವಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

ಮೂಲಸೌಕರ್ಯದ ಕೊರತೆ

ವರ್ಷಕ್ಕೆ 30 ರಿಂದ 40 ಲಕ್ಷ ಪ್ರವಾಸಿಗರು ಕೊಡಗಿಗೆ ಭೇಟಿ ನೀಡುತ್ತಿದ್ದು, ಹಾಗಿದ್ದ ಸಂದರ್ಭದಲ್ಲಿ ಇಲ್ಲಿನ ಪ್ರವಾಸಿತಾಣಗಳನ್ನು ಕೂಡ ಸಕಲ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕಲ್ಲವೆ? ಇಂದು ಜಿಲ್ಲೆಯ ಬಹಳಷ್ಟು ಪ್ರವಾಸಿತಾಣಗಳಲ್ಲಿ ಹೇಳುವವರು, ಕೇಳುವವರು ಇಲ್ಲದಾಗಿದೆ. ಜತೆಗೆ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳೇ ಇಲ್ಲದಾಗಿದೆ. ಒಂದು ವೇಳೆ ಇತ್ತ ಗಮನಹರಿಸಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಿದರೆ ಪ್ರವಾಸಿಗರು ಕೂಡ ಸಂತಸದಿಂದ ಸಮಯ ಕಳೆಯಲು ಸಾಧ್ಯವಾಗಲಿದೆ. ಆದರೆ ಎಲ್ಲೋ ಒಂದು ಕಡೆ ಪ್ರವಾಸೋದ್ಯಮದಿಂದ ಬೊಕ್ಕಸಕ್ಕೆ ಹಣ ಹರಿದು ಹೋಗುತ್ತಿದ್ದರೂ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಪ್ರವಾಸಿಗರಿಗೆ ತಕ್ಕಂತಹ ಸೌಲಭ್ಯ ಕಲ್ಪಿಸುವುದು ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ.

ಇದನ್ನು ಓದಿ:

https://infomindz.in/patharaguttida-pak/
Prev Post

ಯಾವುದೇ ಕ್ಷಣದಲ್ಲಿಯೂ ಭಾರತ ದಾಳಿಗೆ: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್

Next Post

ವಾಯುಮಾರ್ಗ ಮುಚ್ಚುವ ನಿರ್ಧಾರ ಕೈಗೊಂಡ ಭಾರತ

post-bars

Leave a Comment

Related post