ಖಾಸಗಿ ಶಾಲೆ ಬಸ್ನ ಮಹಿಳಾ ಕಂಡಕ್ಟರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ
ಚಿತ್ರದುರ್ಗ: ಖಾಸಗಿ ಶಾಲೆಯ ಬಸ್ ನಿರ್ವಾಹಕಿಯ (Women conductors )ತಲೆಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಅರಣ್ಯದಲ್ಲಿ ನಡೆದಿದೆ.
ಮೃತರನ್ನು ಹೊಳಲ್ಕೆರೆ ತಾಲ್ಲೂಕಿನ ರಾಮಘಟ್ಟ ಗ್ರಾಮದ ನಿವಾಸಿ ಆಶಾ (25) ಎಂದು ಗುರುತಿಸಲಾಗಿದೆ. ಈಕೆ ಹೊಳಲ್ಕೆರೆಯ ಖಾಸಗಿ ಶಾಲೆಯ ಬಸ್ ನಿರ್ವಾಹಕಿಯಾಗಿದ್ದರು.
ಈಕೆಯು ತನ್ನ ಸ್ನೇಹಿತನಾದ ಅನಿಲಾಸನ್ಗೆ ಸಾಲದ ರೂಪದಲ್ಲಿ 56,000 ರೂಪಾಯಿ ನೀಡಿದ್ದರು. ಆದರೆ ಸಾಲದ ಹಣ ಹಿಂತಿರುಗಿಸದೇ ಸತಾಯಿಸ್ತಿದ್ದ ಸ್ನೇಹಿತನೊಂದಿಗೆ ಜಗಳವಾಗಿದ್ದು, ಹಲವು ಬಾರಿ ಸ್ಥಳಿಯರ ಸಮ್ಮುಖದಲ್ಲಿ ರಾಜೀ, ಪಂಚಾಯ್ತಿಗಳು ನಡೆದಿದ್ದವು.
ಕಳೆದ ಎರಡು ದಿನಗಳ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್ ಕೆಂಗುಂಟೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಅಲ್ಲದೇ ಅತ್ಯಾಚಾರ ಎಸಗಿರುವ ಶಂಕೆಯೂ ಇದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.