ಪ್ರೀಸ್ಕೂಲ್ಗೆ ಬರುತ್ತಿದ್ದ ಮಗುವಿನ ತಂದೆಗೆ ಮುತ್ತಿನ ಬಲೆ ಬೀಸಿದ ಶಿಕ್ಷಕಿ: ಒಂದು ಕಿಸ್ ಗೆ 50 ಸಾವಿರ
ಬೆಂಗಳೂರಿನ ಖಾಸಗಿ ಪ್ರೀಸ್ಕೂಲ್ ಶಿಕ್ಷಕಿಯೊಬ್ಬರು ಶಾಲೆಗೆ ಬರುವ ಮಗುವಿನ ತಂದೆಗೆ ಕಿಸ್ಕೊಟ್ಟು ಮಧುಬಲೆಗೆ ಬೀಳಿಸಿಕೊಂಡು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು : ಬೆಂಗಳೂರಿನ ಖಾಸಗಿ ಪ್ರೀಸ್ಕೂಲ್ ಶಿಕ್ಷಕಿಯೊಬ್ಬರು ಶಾಲೆಗೆ ಬರುವ ಮಗುವಿನ ತಂದೆಗೆ ಕಿಸ್ಕೊಟ್ಟು ಮಧುಬಲೆಗೆ ಬೀಳಿಸಿಕೊಂಡು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೊಲೀಸ್ ಬಲೆಗೆ ಬಿದ್ದಿದ್ದಾರೆ. 25 ವರ್ಷದ ಯುವತಿ ಮತ್ತು ಆಕೆಯ ಸಹಚರರನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್ಗೆ ಹಾಜರುಪಡಿಸಿದ್ದಾರೆ.
ಕೋರ್ಟ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕರ್ನಾಟಕದ ಉದ್ದಗಲಕ್ಕೂ ಸಚಿವ ರಾಜಣ್ಣ ಹನಿಟ್ರ್ಯಾಪ್ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದು ರಾಜಕೀಯದ ವಿಚಾರವಾದರೆ, ಇನ್ನೊಂದೆಡೆ ಸಮಾಜದಲ್ಲೂ ಸಣ್ಣಪುಟ್ಟ ವಿಚಾರಕ್ಕೆ ಬ್ಲ್ಯಾಕ್ಮೇಲ್ ಮಾಡುವುದಕ್ಕೆ ಹನಿಟ್ರ್ಯಾಪ್ ಮಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಂತಹ ಪ್ರಕರಣದ ಪೈಕಿ ಇದೂ ಒಂದು.

ಬೆಂಗಳೂರು ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಪ್ರೀಸ್ಕೂಲ್ಗೆ ಬರುತ್ತಿದ್ದ ಮಗುವಿನ ತಂದೆಗೆ ಕಿಸ್ಕೊಟ್ಟು ಮಧುಬಲೆ ಬೀಸಿದ ಪ್ರೀಸ್ಕೂಲ್ ಶಿಕ್ಷಕಿಯನ್ನು ಹಾಗೂ ಆಕೆಯ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶ್ರೀದೇವಿ ರುಡಗಿ (25), ಗಣೇಶ್ ಕಾಳೆ (38), ಸಾಗರ್ (28) ಎಂದು ಗುರುತಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಸಂತ್ರಸ್ತ ವ್ಯಕ್ತಿ ಗುಜರಾತ್ ಮೂಲದ ಉದ್ಯಮಿಯಾಗಿದ್ದು, ಅವರ ಹೆಸರನ್ನು ಬಹಿರಂಗಪಡಿಸಿಲ್ಲ.
ಉದ್ಯಮಿ ತಮ್ಮ 5 ವರ್ಷದ ಮಗಳನ್ನು 2023ರಲ್ಲಿ ಪ್ರೀಸ್ಕೂಲ್ಗೆ ದಾಖಲಿಸಿದ್ದರು.
ಅಲ್ಲಿಂದಾಚೆಗೆ ಶ್ರೀದೇವಿ ಮತ್ತು ಉದ್ಯಮಿ ನಡುವೆ ಸಂಪರ್ಕ ಬೆಳೆದು ಅದು ಸ್ನೇಹಕ್ಕೆ ಕಾರಣವಾಗಿತ್ತು. ಖಾಸಗಿ ಪೋನ್ ನಂಬರ್ ಅನ್ನು ಇಬ್ಬರೂ ವಿನಿಮಯ ಮಾಡಿಕೊಂಡಿದ್ದು, ವಿಡಿಯೋ ಕರೆ ಕೂಡ ಮಾಡ್ತಾ ಇದ್ದರು. ಒಂದು ಹಂತದಲ್ಲಿ ಶ್ರೀದೇವಿ ಉದ್ಯಮಿ ಬಳಿ, ತತ್ಕ್ಷಣದ ವಹಿವಾಟಿಗೆ ಬೇಕು ಎಂದು 4 ಲಕ್ಷ ರೂಪಾಯಿ ಸಾಲವನ್ನೂ ಪಡೆದುಕೊಂಡಿದ್ದಳು. ಆದರೆ ಅದನ್ನು ಹಿಂದಿರುಗಿಸಿರಲಿಲ್ಲ. ಅಲ್ಲಿಂದಾಚೆಗೆ ಉದ್ಯಮಿಗೆ ಪರಿಸ್ಥಿತಿ ಹಿಡಿತ ತಪ್ಪಿ ಹೋಗಿತ್ತು. ಇನ್ನೂ 15 ಲಕ್ಷ ರೂಪಾಯಿ ಬೇಕು ಎಂದು ಆಕೆ ಒತ್ತಾಯಿಸಿದ್ದರು. ಈ ನಡುವೆ ಉದ್ಯಮಿಯ ಹಣಕಾಸು ಸ್ಥಿತಿ ಬಿಗಡಾಯಿಸಿದ ಕಾರಣ ಗುಜರಾತ್ಗೆ ಮರಳುವ ತೀರ್ಮಾನ ತೆಗೆದುಕೊಂಡಿದ್ದರು ಎಂದು ವರದಿ ಹೇಳಿದೆ.
ಕುಟುಂಬವನ್ನು ಗುಜರಾತ್ಗೆ ಕಳುಹಿಸಿದ ಉದ್ಯಮಿ ಮಗಳ ಟಿಸಿ ಪಡೆಯಲು ಪ್ರೀಸ್ಕೂಲ್ಗೆ ಹೋದಾಗಿದ್ದರು. ಅಲ್ಲಿ ಉದ್ಯಮಿಗೆ 4 ಲಕ್ಷ ರೂಪಾಯಿ ಹಿಂದಿರುಗಿಸದೇ ಇದ್ದ ಶ್ರೀದೇವಿ, ಖಾಸಗಿ ಕ್ಷಣಗಳ ಫೋಟೋ ವಿಡಿಯೋ ತೋರಿಸಿ ಉದ್ಯಮಿಯನ್ನು ಬೆದರಿಸಲಾರಂಭಿಸಿದರು. 20 ಲಕ್ಷರೂಪಾಯಿಗೆ ಬೇಡಿಕೆ ಇಟ್ಟರು.
ಆಕೆಯ ಸಹಚರರು ಕೂಡ ಬೆದರಿಕೆ ಒಡ್ಡಿದ್ದರು ಎಂದು ವರದಿ ವಿವರಿಸಿದೆ.
ಶ್ರೀದೇವಿ ರುಡಗಿ ಅವರ ಕಚೇರಿಯೊಳಗೆ ಗಣೇಶ್ ಕಾಳೆ ಮತ್ತು ಸಾಗರ್ ಉದ್ಯಮಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಕೊನೆಗೆ 15 ಲಕ್ಷ ರೂಪಾಯಿ ನೀಡಲು ಒಪ್ಪಿದ ಬಳಿಕ ಅಲ್ಲೇ ಆರಂಭಿಕ ಮೊತ್ತವಾಗಿ 1.9 ಲಕ್ಷ ರೂಪಾಯಿ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಮಾರ್ಚ್ 17 ರಂದು ಉದ್ಯಮಿಗೆ ಕರೆ ಮಾಡಿದ ಶ್ರೀದೇವಿ ಮಾಜಿ ಪೊಲೀಸ್ ಅಧಿಕಾರಿಗೆ 5 ಲಕ್ಷ ರೂಪಾಯಿ ಕೊಡಬೇಕು, ತಲಾ 1 ಲಕ್ಷ ಸಹಚರರಿಗೆ ಕೊಡಬೇಕು, ಉಳಿದ 8 ಲಕ್ಷ ರೂ ತನಗೆ ಕೊಡಬೇಕು ಎಂದು ಒತ್ತಡ ಹೇರಿದ್ದರು. ಈ ಎಲ್ಲ ವಿಚಾರಗಳನ್ನು ಉದ್ಯಮಿ ತಮ್ಮ ದೂರಿನಲ್ಲಿ ವಿವರಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಉದ್ಯಮಿ ಬೆಂಗಳೂರು ಸಿಸಿಬಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅರೋಪಿಗಳನ್ನು ಬಂಧಿಸಿದರು.
ಇದನ್ನು ಓದಿ: