“ಯಕ್ಷ ಕಲಾ ವರದೆ”
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705
ಇವರು ಹುಟ್ಟಿದ್ದು ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ, ವರ ಮಹಾಲಕ್ಷ್ಮಿಯ ದಿನ. ಅದೇ ಕಾರಣ ಇವರಿಗೆ ವರದಾಂಬಿಕಾ (ವರದಾ) ಎಂದು ಇವರ ತಂದೆ ಶಂಕರನಾರಾಯಣ ಭಟ್ ಹಾಗೂ ತಾಯಿ ನಾಗವೇಣಿ ಭಟ್ ನಾಮಕರಣ ಮಾಡಿದರು. ಪಿಯುಸಿ ಇವರ ವಿದ್ಯಾಭ್ಯಾಸ.
ಯಕ್ಷಗಾನ ಗುರುಗಳು ಯಾರು:
ಆರಂಭದಲ್ಲಿ ಎ.ಆರ್ ಗಣಪತಿ, ಕೆ.ಜಿ. ರಾಮ್ ರಾವ್, ಉಡುಪಿ ಕೇಂದ್ರದ ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ, ನಂತರ ಸದಾಶಿವ ಭಟ್, ಗುರುನಂದನ ಹೊಸೂರು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಏನು:
ನನ್ನ ಸೋದರತ್ತೆ ಮಹಾಲಕ್ಷ್ಮಿ ಜೋಯ್ಸ ಪ್ರಸಂಗಕರ್ತೆ ಇವರು ಕೊಲ್ಲೂರು ಕ್ಷೇತ್ರ ಮಹಾತ್ಮೆ, ಬೋಜ ಕಾಳಿದಾಸ ಬರೆದವರು, ಮತ್ತೆ ನನ್ನ ಮಾವ ಲಿಂಗದಕೈ ಮಹಾಬಲಯ್ಯ ಇವರು ಸಹ ಭಾಗವತಿಕೆಯಲ್ಲಿ ಹೆಸರು ಮಾಡಿದವರು.
ಹಾಗೆ ನನ್ನ ತಂದೆ ಕೂಡ ಕೊಲ್ಲೂರು ಮೇಳದಲ್ಲಿ ಈಶ್ವರ ಜಾಂಬವ ಕೃಷ್ಣ ಹೀಗೆ ಅನೇಕ ಪಾತ್ರಮಾಡಿದ್ದರಂತೆ (ನಾನು ನೋಡಲಿಲ್ಲ). ಹಿರಿಯ ಕಲಾವಿದ ವೀರಭದ್ರ ನಾಯ್ಕರ ಕಾಲದಲ್ಲಿ ಹವ್ಯಾಸಿಯಾಗಿ ತಂದೆ ಪಾತ್ರ ಮಾಡಿದವರು. ಚಿಕ್ಕಪ್ಪ ಕೂಡಾ ಸ್ತ್ರೀ ವೇಷಧಾರಿ, ದ್ರೌಪದಿ, ದಮಯಂತಿ, ಹಿಡಂಭಿ, ಪೂತನಿ ಪಾತ್ರ ನಿರ್ವಹಿಸದವರು, ಅಣ್ಣ ಕೂಡಾ ಹವ್ಯಾಸಿ ಯಕ್ಷಗಾನ ಕಲಾವಿದ. ಕರ್ಣ, ಹಿರಣ್ಯಕಷ್ಯಪು, ಅರ್ಜುನ ಹೀಗೆ ಪಾತ್ರ ಮಾಡಿದ್ದಾರೆ, ಪಾತ್ರ ನಿರ್ವಹಿಸಿದ್ದಾರೆ ಅನ್ನೋದಕ್ಕಿಂತ ತುಂಬಾ ಯಕ್ಷಗಾನ ಅಭಿಮಾನಿ, ನಂತರದಲ್ಲಿ ನಾನು ಈ ಯಕ್ಷಗಾನ ಕ್ಷೇತ್ರಕ್ಕೆ ಬಂದೆ. ಅಣ್ಣನ ಮಗ ಪ್ರಣವ ಶಂಕರ ಭಟ್ ಅವನೂ ಇದೇ ಕ್ಷೇತ್ರದಲ್ಲಿ ಇದ್ದಾನೆ. ಒಟ್ಟು ನಮ್ಮ ಕುಟುಂಬವೇ ಒಂದು ರೀತಿಯಲ್ಲಿ ಕಲಾವಿದರ ಕುಟುಂಬ ಆಗಿದೇ
24 ವರ್ಷದಿಂದ ನಾನು ಭರತನಾಟ್ಯ ಕಲಾವಿದೆಯಾಗಿ ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಗೀತಾ ದಾತಾರ್ ಅವರ ಪ್ರೀತಿಯ ಶಿಷ್ಯೆ, ಅವರೊಂದಿಗೆ ದೇಶದ ಹಲವೆಡೆ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದೇನೆ. ಹಾಗೆ ಕರ್ನಾಟಕ ಬೋರ್ಡ್ ಎಕ್ಸಾಮ್ ಗೂ ಎಕ್ಸಾಮಿನರ್ ಆಗಿ ಹೋಗ್ತಾ ಇದ್ದೇನೆ. ಹಲವು ಕಡೆ ನೃತ್ಯ ಸoಯೋಜನೆ ಅನ್ನು ಮಾಡಿದ್ದೇನೆ. ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಅವರ ಎದುರು ಮೂರು ದೇಶದ ಮಕ್ಕಳಿಗೆ ನೃತ್ಯ ಕಲಿಸಿದ ಸಂತೋಷ ಇದೆ ಹಾಗೆ ಸ್ವಾಮಿಯಿಂದ ಸನ್ಮಾನವನ್ನು ಪಡೆದಿದ್ದೇನೆ ನನ್ನ ಭಾಗ್ಯ ಅದು. ಹಾಗೆ ಕಲಾ ಮಂಡಲಂ ಉಷಾ ದಾತರ್ ರವರು ನಡೆಸಿದ ಮೋಹಿನಿ ಅಟ್ಟಂ ಕಲಿತು ಕಾರ್ಯಕ್ರಮ ನೀಡಿದ್ದೇನೆ. ಒಂದು ರೀತಿಯಲ್ಲಿ ಈ ಕಲೆ ಎನ್ನುವುದು ರಕ್ತಗತವಾಗಿ ಬಂದಿದೆ.

ನಾನು 2008 ರಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಬಂದವಳು. ಆದರೆ ಇದೆಲ್ಲಾ ಸಾಧ್ಯವಾದದ್ದು ಮಾತ್ರ ಮದುವೆ ಆಗಿ ಮಗ ಹುಟ್ಟಿದ ಮೇಲೆ. ನನ್ನ ಯಜಮಾನರು ಮಧುಸೂದನ ಐತಾಳ್ ತುಂಬಾ ಅಂದ್ರೆ ತುಂಬಾ ಸಹಕಾರ ನೀಡ್ತಾ ಇದ್ದಾರೆ. ಎಷ್ಟು ದೂರ ಕಾರ್ಯಕ್ರಮ ಇದ್ದರೂ ಕೂಡ ಬರ್ತಾರೆ. ನನ್ನ ಪಾತ್ರ ನೋಡಿ, ಹಾಗೆ ಮಾಡಬಹುದಿತ್ತು, ಹೀಗೆ ಹೇಳಬಹುದಿತ್ತು ಅಂತ ತಿದ್ದಿ ಹೇಳ್ತಾರೆ. ನಮ್ಮದೇ ಆದ “ಸಾಯಿ ಕಲಾ ಪ್ರತಿಷ್ಠಾನ (ರಿ) ಇದೆ. ಅದರಲ್ಲಿ ಮಹಿಳಾ ಸಮ್ಮೇಳನ ಮಾಡಿಸಿದ್ದೇವೆ.
ನಿಮ್ಮ ನೆಚ್ಚಿನ ಪ್ರಸಂಗ ಯಾವುದು ಹಾಗೂ ನಿರ್ವಹಿಸಿದ ಪಾತ್ರಗಳು:
ಪೌರಾಣಿಕ ಪ್ರಸಂಗ ನನಗೆ ತುಂಬಾ ಇಷ್ಟ. ಕೊಟ್ಟ ಪಾತ್ರಕ್ಕೆ ಜೀವ ತುಂಬುವುದೇ ಇಷ್ಟ.
ಅತೀ ಇಷ್ಟ ಅಂತ ಹೇಳಿದ್ರೆ ಕೃಷ್ಣನ ಪಾತ್ರ ತುಂಬಾ ಇಷ್ಟ .ಪುಂಡು ವೇಷ ಮಾಡಿದ್ದು ಜಾಸ್ತಿ. ಸ್ತ್ರೀ ವೇಷದಲ್ಲಿ ದಾಕ್ಷಾಯಿಣಿ, ಮಂಡೋದರಿ ತುಂಬಾ ಸಂತೋಷದ ಪಾತ್ರ, ದಕ್ಷಯಜ್ಞ, ಕಂಸ ವಧೆ, ಲವಕುಶ, ರಾಮಾಂಜನೇಯ, ಭೌಮಾಸುರ ಕಾಳಗ, ಬಬ್ರುವಾಹನ ಕಾಳಗ, ಕೃಷ್ಣ ಸಂಧಾನ, ಅಭಿಮನ್ಯು ಕಾಳಗ, ರಾಜಾ ಯಯಾತಿ ಹೀಗೆ ಅನೇಕ ಪ್ರಸಂಗದಲ್ಲಿ ವೇಷ ಮಾಡಿದ್ದೇನೆ.
ನಿರ್ವಹಿಸಿದ ಪಾತ್ರ ಹೇಳಿದ್ರೆ ಕೃಷ್ಣ, ಲವ, ಹನುಮಂತ, ಬಬ್ರುವಾಹನ, ಬಲಿಚಕ್ರವರ್ತಿ, ಅಂಬೆ, ಶ್ರೀದೇವಿ, ದ್ರೌಪದಿ, ಸುಭದ್ರೆ, ಶಶಿಪ್ರಭೆ, ದೇವಯಾನಿ, ಅಸ್ತಿ, ವಿಷ್ಣು, ಅನಿರುದ್ಧ , ಪ್ರದ್ಯುಮ್ನ, ಬಲರಾಮ, ಜಾಂಬವ, ಸತ್ಯಭಾಮೆ ಹೀಗೆ ಅನೇಕ.
“ಶಂಕರ ವಿಜಯ” ಅದರಲ್ಲಿ ಶಂಕರಾಚಾರ್ಯ ಪಾತ್ರ ಮಾಡಿದ್ದೇನೆ. ಮಹಿಳೆಯರಲ್ಲೇ ಮೊಟ್ಟ ಮೊದಲ ಬಾರಿಗೆ ಶಂಕರಾಚಾರ್ಯ ಮಾಡಿದ ಹೆಮ್ಮೆ ಇದೇ. ಇದು ಒಂದು ಸವಾಲಿನ ಪಾತ್ರ ಕೂಡ ಕುಣಿತ ಇಲ್ಲ ಕೇವಲ ಮಾತು ಹಾಗೂ ಬಾವನೆಯ ಪಾತ್ರ ಅಷ್ಟೇ ಅಲ್ಲದೆ ಆಧ್ಯಾತ್ಮಿಕ ಪಾತ್ರ ಮಾತಿನಲ್ಲಿ ಸ್ವಲ್ಪವೂ ವ್ಯತ್ಯಾಸ ಆಗಬಾರದು ಕೂಡ, ವೇಷವೂ ಹಾಗೆ ಗಡ್ಡದ ಮುನಿಯ ವೇಷ ಅಲ್ಲ ಈಗಿನ ಸನ್ಯಾಸಿ ವೇಷ ಒಂದು ರೀತಿಯಲ್ಲಿ ನನ್ನ ಪಾಲಿನ ಅವಿಸ್ಮರಣೀಯ ಪಾತ್ರ ಅದರ ನಿರ್ದೇಶನ ಮಾಡಿದ ಗುರುನಂದನ ಹೊಸೂರು ಅವರು ನನ್ನಲ್ಲಿ ಒಂದು ಒಳ್ಳೆಯ ಪಾತ್ರ ಮಾಡಿಸಿದ್ದರು ಎಂಬ ಹೆಮ್ಮೆ ಈಗಲೂ ಇದೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:
ಇಂತಾ ಪ್ರಸಂಗ, ಇಂತಾ ಪಾತ್ರ ನಿಮ್ಮದು ಹೇಳಿದ್ರೆ ಮೊದಲು ಪಾತ್ರ ಯಾವುದು ಅಂತ ನೋಡ್ತೇನೆ. ಯಾಕೆ ಅಂದ್ರೆ ನನ್ನ ವಯಸ್ಸಿಗೆ ಆಗುವಂತದ್ದು. ಒಮ್ಮೆ ವಿಷಯೆ ಮಾಡಲು ಕರೆ ಬಂತು. ಆಗ ನಾನು ಆ ಪಾತ್ರ ಮಾಡುವುದಿಲ್ಲ ಹೇಳಿದೆ. ಯಾಕೆ ಅಂದ್ರೆ ನನ್ನ ವಯಸ್ಸಿಗೂ ಆ ಪಾತ್ರಕ್ಕೂ ಸರಿ ಹೊಂದುವುದಿಲ್ಲ. ಆ ಪಾತ್ರ ನಾನು ಆಗಲು ಕಷ್ಟ. ಸುಮ್ಮನೆ ಹೋಗಿ ಪಾತ್ರ ಮಾಡಲು ನಾನು ಸಿದ್ಧಳಿಲ್ಲ. ನನ್ನ ವಯಸ್ಸಿಗೆ ಸ್ವಲ್ಪ ಆದರೂ ಹೊಂದಬೇಕು. ದೊಡ್ಡ ಪಾತ್ರವಿರಲಿ ಚಿಕ್ಕದ್ದೆ ಇರಲಿ. ನನ್ನ ಎದುರಿನ ಪಾತ್ರ ಯಾವುದು, ಆ ಪಾತ್ರದ ಪೂರ್ವಾಪರ ಮತ್ತೆ ನನ್ನ ಪಾತ್ರದ ಪೂರ್ವಾಪರವನ್ನು ಕೇಳಿ ತಿಳಿದುಕೊಳ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ನಿಮ್ಮ ಅಭಿಪ್ರಾಯ:
ಹಿಂದೆ ಊರಲ್ಲಿ ಯಕ್ಷಗಾನ ಅಂದ್ರೆ ಟೆಂಪೊದಲ್ಲಿ ಹ್ಯಾಂಡ್ ಬಿಲ್ ಎಸೆಯುತ್ತಾ ಬೀದಿ ಬೀದಿಯಲ್ಲಿ ಟೆಂಪೋ ಹೋಗ್ತಿತ್ತು. ಅದರ ಹಿಂದೆ ನಾನು ಓಡ್ತಾ ಇದ್ದೆ. ಒಂದು ನೀಲಿ ಬಣ್ಣ ಅಥವಾ ಪಿಂಕ್, ಹಸಿರು ಬಣ್ಣದ ಪೇಪರ್. ಆದರೆ ಈಗ ದುಬಾರಿ ಪೇಪರ್ ನಿಂದ ಪೋಸ್ಟರ್ ಮಾಡಿ ಮನೆ ಬಾಗಿಲಿಗೆ ಹೋಗಿ ಕೊಟ್ಟರೂ ಜನ ಬರುವುದಿಲ್ಲ. ಅಂಥಾ ಸ್ಥಿತಿ. ಮತ್ತೆ ಹಿಂದೆ ಒಂದು ಪ್ರಸಂಗ ಅಂದ್ರೆ ಹೊಸ ಹೊಸ ವಿಚಾರ ಸಿಗ್ತಾ ಇತ್ತು. ಪ್ರಸಂಗದ ಚೌಕಟ್ಟು ಮೀರುತ್ತಿರಲಿಲ್ಲ. ಆದ್ರೆ ಈಗ, ಬರೀ ಒಬ್ಬರ ಕಾಲು ಇನ್ನೊಬ್ಬರು ಎಳೆಯುವುದೇ ಒಂದು ಪ್ರಸಂಗ ಆಗಿದೆ. ಯಾರಲ್ಲಿ ಆದ್ರೂ, ಹೋಗಿ ಬನ್ನಿ ಯಕ್ಷಗಾನ ಇದೆ ಅಂದ್ರೆ, ಒಂದು ಸ್ವಲ್ಪನೂ ರಾಮಾಯಣ ಮಹಾಭಾರತದ ವಿಚಾರ ಇರುವುದಿಲ್ಲ. ಕಲಾವಿದರ ರಾಮಾಯಣ ಕೇಳಲು ಬರಬೇಕಾ, ಕೇಳ್ತಾರೆ. ಅಂತಹ ಸ್ಥಿತಿ.

ಯಕ್ಷಗಾನದ ಪ್ರೇಕ್ಷಕರನ್ನು ದೂರಿ ಏನು ಪ್ರಯೋಜನ? ಒಂದು ಮನೆಯಲ್ಲಿ ಮದುವೆ ಮಾಡಿದರೆ ಹೇಗೆ ಎಲ್ಲರೂ ಒಂದಾಗಿ ಸಿದ್ಧತೆ ಮಾಡ್ತೇವೆ. ಹಾಗೆ ಕಲಾವಿದರಾದವರು ಒಂದು ಪ್ರಸಂಗವನ್ನು ಅಷ್ಟು ಜನ ಸೇರಿ ಮಾಡಿದಾಗ, ಪ್ರೇಕ್ಷಕರು, ಅಭಿಮಾನಿಗಳು ಯಾರು ಒಬ್ಬರ ಕಡೆ ಇರುವುದಿಲ್ಲ.. ಏ.. ಇವತ್ತಿನ ಆಟ ಅಂದ್ರೆ ಬಾರಿ ಒಳ್ಳೆದಾಗಿದೆ ಹೇಳ್ತಾರೆ ವಿನಃ ಅವರದ್ದು ಇವರದ್ದು ಅಂತ ಹೇಳುವುದಿಲ್ಲ. ಇದು ನನ್ನ ಅನಿಸಿಕೆ ಅಷ್ಟೇ. ತಂಡಕ್ಕೆ ತಂಡವೇ ಒಳ್ಳೆ ಹೆಸರು ಪಡೆಯುತ್ತದೆ ಪ್ರೇಕ್ಷಕರಿಂದ. ಇನ್ನೊಂದು ವಿಚಾರ, ಅವರ ಅಭಿಮಾನಿ, ಇವರ ಅಭಿಮಾನಿ ಅಂತ ಪ್ರೇಕ್ಷಕರು ಚೌಕಿಗೆ ಬಂದು ತಮ್ಮ ತಮ್ಮ ಪ್ರೀತಿಯ ಕಲಾವಿದರಿಗೆ ಏನೆಲ್ಲಾ ತರ್ತಾರೆ. ಹಣ್ಣೋ ಹಂಪಲೋ ಏನಾದರೂ. ಆದರೆ ಅದೇ ಕಲಾವಿದರು ಆಟ ಮುಗಿದ ಮೇಲೆ ಯಾರ ಕೈಗೂ ಸಿಗಲಾರರು. ಒಬ್ಬ ಅಭಿಮಾನಿಗೆ ಕಷ್ಟ ಅಂದ್ರೆ ಯಾವ ಕಲಾವಿದರು ಬರ್ತಾರೆ ಮನೆ ಬಾಗಿಲಿಗೆ ಹೇಳಿ?.. ಅದೇ ಕಲಾವಿದರಿಗಾದ್ರೆ ವಾಟ್ಸಾಪ್, ಫೇಸ್ಬುಕ್ ಹೀಗೆ ಎಲ್ಲಾ ಕಡೆ ಸಹಾಯ ಕೇಳಿ ಬರೆಯುತ್ತಾರೆ. ಇದೆಲ್ಲಾ ಪ್ರೇಕ್ಷಕರು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ. ಇದು ತಪ್ಪೋ – ಒಪ್ಪೋ ಗೊತ್ತಿಲ್ಲ. ಕಲಾವಿದರಿಗೆ ಇರುವಷ್ಟೇ ಕಷ್ಟ ಸುಖ ಅಭಿಮಾನಿಗಳಿಗೂ, ಪ್ರೇಕ್ಷಕ ವರ್ಗಕ್ಕೂ ಇರ್ತದೆ ಅಲ್ವಾ??
ಪ್ರೇಕ್ಷಕರಿಗಾಗಿ ಧರ್ಮಕ್ಕೆ ನಾವು ಆಟ ಮಾಡ್ತೇವಾ?? ಇಲ್ಲ. ಅವರಿಗೆ ಕೊಡಬೇಕು, ಇವರಿಗೆ ಕೊಡಬೇಕು ಅಂತ ಲೆಕ್ಕ ಹಾಕ್ತೇವೆ. ಆದ್ರೆ ಒಬ್ಬ ಪ್ರೇಕ್ಷಕ ಒಬ್ಬ ಕಲಾವಿದರಿಗಾಗಿ ಎಷ್ಟೋ ಕೊಡಲು ಮುಂದಾಗ್ತಾರೆ. ಇದು ಬಾಲಿಷ ವಿಚಾರ ಅಂತ ಎನಿಸಬಹುದು. ಯಾರೊಬ್ಬರಿಂದ ಒಂದು ಪ್ರಸಂಗ ಆಗುವುದಿಲ್ಲ. ಅಕ್ಕ ಪಕ್ಕದವರೂ ಹಿಂದೆ ಕುಳಿತವರು ಇದ್ದರೆ ಮಾತ್ರ ಒಂದು ಆಟ ಯಶಸ್ವಿಯಾಗಿ ನಡೆಯಲು ಸಾಧ್ಯ ಅಂತ ನನ್ನ ಭಾವನೆ. ನಾನು ಮೇಲೆ ಬರಬೇಕು ಅಂತ ಮತ್ತೊಬ್ಬರನ್ನು ತುಳಿದರೆ.. ತುಳಿಸಿಕೊಂಡವರೆ ಮೇಲೆ ಬರ್ತಾರೆ. ಇದು ಪ್ರೇಕ್ಷಕನೂ ಯೋಚಿಸಬೇಕು. ತಪ್ಪಿದ್ದರೆ ಕ್ಷಮೆ ಇರಲಿ.

ಯಕ್ಷಗಾನ ರಂಗದಲ್ಲಿ ಮುಂದಿನ ನಿಮ್ಮ ಯೋಜನೆ:
ಮುಂದಿನ ಯೋಜನೆ ಅಂತ ಮಹಿಳೆಯರು ಮೊದಲೇ ನಿರ್ಧಾರ ಮಾಡುವುದು ಕಷ್ಟ. ಸಂಸಾರದ ಜವಾಬ್ದಾರಿಗಳು ಆಗಾಗ ಎದುರು ಬಂದು ನಾನಿದ್ದೇನೆ ನೆನಪಿರಲಿ ಅಂತ ಎಚ್ಚರಿಸುತ್ತದೆ. ಹಾಗಾಗಿ ಯಾವ ಯೋಚನೆ – ಯೋಜನೆ ಮಾಡಿಲ್ಲ. ಪಾತ್ರಕ್ಕೆ ಕರೆದರೆ, ನಮ್ಮ ಪಾತ್ರಕ್ಕೆ ನಮ್ಮಿಂದ ಆದಷ್ಟು ನ್ಯಾಯ ಒದಗಿಸುವುದೇ ನನ್ನ ಯೋಚನೆ ಯೋಜನೆ.
ಭಾಗವಹಿಸಿದ ಸಂಘಟನೆ ಹಾಗೂ ಮೇಳದ ಹೆಸರು:
ಶ್ರೀ ಭಾರತೀ ಕಲಾ ಪ್ರತಿಷ್ಠಾನದ ಕಲಾವಿದೆಯಾಗಿ ಪಾತ್ರ ನಿರ್ವಹಿಸುತ್ತಿರುವ ನಾನು ಯಕ್ಷ ಸಿರಿ, ಸಿರಿ ಕಲಾ ಮೇಳ ಹಾಗೂ ಸಾಕೇತ ಕಲಾವಿದರ ಜೊತೆ ಪಾತ್ರ ಮಾಡಿದ್ದೇನೆ, ಕಳಸದ ಒಂದು ಪ್ರತಿಷ್ಠಾನ. ಸುರೇಂದ್ರ ಪಣಿಯೂರು ನಿರ್ದೇಶನದಲ್ಲಿ ನಡೆದ ಹಿರಿಯ ಕಲಾವಿದರಾದ ಐರೋಡಿ ಗೋವಿಂದಪ್ಪ ಮತ್ತು ಕೋಡಿ ವಿಶ್ವನಾಥ ಗಾಣಿಗರ ಜೊತೆ ಕರ್ಣ ಪರ್ವದ ಕೃಷ್ಣ ಮಾಡಿದ್ದೇನೆ.
ಯಕ್ಷ ಸಂವರ್ಧನಾ, (ಐನಬೈಲು ಪರಮೇಶ್ವರ ಹೆಗಡೆಯವರದ್ದು.) ತ್ರಯಂಬಕ ಹೆಗಡೆ ಅವರ ಟೀಮ್ ನಲ್ಲೂ ಮತ್ತು ಶ್ರೀ ಕ್ಷೇತ್ರ ಅಲಸೆ ಮೇಳದಲ್ಲೂ ಭಾಗವಹಿಸಿದ್ದೇನೆ. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಮೇಳದಲ್ಲೂ ಪಾತ್ರ ನಿರ್ವಹಿಸಿದ್ದೇನೆ. ಹಾಗೆ ಶಿವಮೊಗ್ಗದ ಯಕ್ಷ ಕೂಟ (ರಿ) ನಡೆಸಿದ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದೇನೆ. ಕಾಲ ಪುರುಷ (ರಾಮ ನಿರ್ಯಾಣ) ಮತ್ತು ಹನುಮಂತ (ವಾಲಿ ಮೋಕ್ಷ).
ಇತ್ತೀಚೆಗೆ ಶಿರ್ಸಿಯಲ್ಲಿ ಅಜಿತ್ ಕಾರಂತ್, ಎ. ಪೀ ಪಾಠಕ್ ನಿರ್ದೇಶನದ ಕೃಷ್ಣ ಸಂಧಾನ. ಅದರಲ್ಲಿ R.N ಹೆಗ್ಡೆಯವರು ನನ್ನನ್ನು ಕರೆಸಿ ನೀನೇ ದ್ರೌಪದಿ ಮಾಡಬೇಕು ಅಂತ ಹೇಳಿದಾಗ ಸಂತೋಷದಿಂದ ಒಪ್ಪಿ ಮಾಡಿದೆ. ಒಂದು ವಾರ ಬಿಟ್ಟು ಹಿರಿಯ ಮಹಿಳಾ ಯಕ್ಷಗಾನ ಕಲಾವಿದೆ ವಿಜಯ ನಳಿನಿ ರಮೇಶ್ ರವರು ನನ್ನನ್ನು ಮೊದಲ ಬಾರಿ ನೋಡಿದ್ದು. ಅದು ಪಾತ್ರದಲ್ಲಿ ಅಷ್ಟೇ. ಅವರು ನನ್ನ ನಂಬರ್ ಬೇರೆಯವರಲ್ಲಿ ಕೇಳಿ ನನಗೆ ಕಾಲ್ ಮಾಡಿ, ನಿಜಕ್ಕೂ ಅದ್ಭುತವಾದ ದ್ರೌಪದಿ ಮಾಡಿದೆ. ನಿಮ್ಮ ಮುದ್ರೆಗಳು, ಅಭಿನಯ ತುಂಬಾ ಇಷ್ಟ ಆಯ್ತು.. ಅಂತ ಹೇಳಿ ಪ್ರೋತ್ಸಾಹಿದಾಗ ನಾನು ನಿಜಕ್ಕೂ ಪುಣ್ಯವಂತೆ ಅನಿಸಿತು. ಯಾಕೆ ಕೇಳಿದ್ರೆ ಕಾರ್ಯಕ್ರಮ ನೋಡಲು ಬಂದಾಗ ಚೌಕಿಯಲ್ಲಿ ಹೇಳುವುದೇ ಬೇರೆ. ಪರಿಚಯವೇ ಇಲ್ಲದೇ ನಮ್ಮನ್ನು ಗುರುತಿಸಿ ಹೊಗಳಿ ಪ್ರೋತ್ಸಾಹಿಸುವುದೇ ಬೇರೆ. ಇದು ತನಕ ಅವರು ನನ್ನ ಮುಖ ನೋಡಿಲ್ಲ. ವೇಷದಲ್ಲಿ ಅಷ್ಟೇ. ಇದೆಲ್ಲದಕ್ಕೂ ಕಾರಣ ರಾಯಪ್ಪಣ್ಣ ಹೆಗಡೆಯವರು ತುಂಬಾ ಹಿರಿಯರು. ಅವರು ತುಂಬಾ ಉತ್ಸಾಹಿ ಕಲಾ ಪೋಷಕರು.

2008 ರಲ್ಲಿ ಜನಶಿಕ್ಷಣ ಸಂಸ್ಥೆಯವರಾದ ಶ್ರೀಯುತ ಲಕ್ಷ್ಮೀನಾರಾಯಣ ಕಾಶಿ ಮತ್ತೆ ಬಿ. ವೈ. ಅರುಣಾದೇವಿಯವರು ನಡೆಸಿದ ಶಿಬಿರದಲ್ಲಿ “ಉಷಾ ಪರಿಣಯ” ಮಾಡಿದ್ದೆ. ಚೊಚ್ಚಲ ಪ್ರಸಂಗದಲ್ಲಿ ದ್ವಿ ಪಾತ್ರ ಮಾಡಿದ್ದೆ. ಆಗ ಯಕ್ಷ ದಿಗ್ಗಜ ಶಂಭು ಹೆಗಡೆಯವರು ಅತಿಥಿಯಾಗಿ ಬಂದವರು ನಿನ್ನ ನಾಟ್ಯ ಮತ್ತು ಹಸ್ತ ಮುದ್ರಿಕೆ, ಅಭಿನಯ ಭಾರಿ ಚೆನ್ನಾಗಿದೆ, ಮುಂದುವರೆಸಿಕೊಂಡು ಹೋಗಿ ಎನ್ನುವುದಾಗಿ ಹೇಳಿದರು.
ನಾನು 21 ಏಕವ್ಯಕ್ತಿ ಪ್ರದರ್ಶನ ನೀಡಿದ್ದೇನೆ. “ಮಮ ಪ್ರಾಣಾಹಿ ಪಾಂಡವಾಃ” ನಿರ್ದೇಶನ ಕೆ.ಪೀ. ಪಾಠಕ್ ಮತ್ತು ಕೆ.ಜಿ ರಾಮ್ ರಾವ್ ಮತ್ತೆ “ಮಾರಾವತಾರ”, ಇದು ಶಂಭು ಹೆಗಡೆಯವರ ಶಿಷ್ಯರಾದ ಸದಾಶಿವ ಭಟ್ ಮಳವಳ್ಳಿಯವರು ನಿರ್ದೇಶನ ನನಗೆ ಮಾಡಿದ್ದು. ಇದಕ್ಕೆ ದೆಹಲಿಯ N.S.D ಯಲ್ಲಿ ಮತ್ತು ಕನ್ನಡ ಸಂಘ ದೆಹಲಿ ಇವರು “ಕರ್ನಾಟಕ ಭೂಷಣ” ಪ್ರಶಸ್ತಿ ನೀಡಿ ಗೌರವಿಸಿದರು. 2012ರಲ್ಲಿ ಮತ್ತೆ “ಅಭಿನಯ ಶಾರದೆ” ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದರು. ಹಾಗೆ ಬೇರೆ ಬೇರೆ ಸಂಘ ಸಂಸ್ಥೆಯವರು ಸನ್ಮಾನ ಮಾಡಿದ್ದಾರೆ.
ಶ್ರೀಮತಿ ವರದಾ ಅವರು 02.02.1996ರಂದು ಮಧುಸೂದನ್ ಐತಾಳ್ ಅವರನ್ನು ಮದುವೆಯಾಗಿ ಮಗ ಸಾಯಿ ಭರತ್, ಲಂಡನ್ ನ ಪ್ರತಿಷ್ಠಿತ ವರ್ಡ್ ಬ್ಯಾಂಕ್ ಜೆಪಿ ಮೊರ್ಘನ್ನಲ್ಲಿ ಕೋಡಿಂಗ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಜಮಾನರ ಕುಟುಂಬದಲ್ಲಿ ಕಲಾವಿದರು ಅಂತ ಆಗ ಯಾರೂ ಇರಲಿಲ್ಲ. ಎಲ್ಲರೂ ಉದ್ಯೋಗದಲ್ಲಿ ಇದ್ದಾರೆ. ಮಾವ ಹೆಡ್ ಮಾಸ್ಟರ್, ರಾಜಕೀಯದಲ್ಲೂ ಇದ್ದವರು. ಆಗ ಎಲ್ಲರೂ ಮಾಸ್ಟ್ರ ಮನೆ ಅಂತ ಕರೆಯುತ್ತಿದ್ದರು, ಆದರೆ ಈಗ ಡಾಕ್ಟ್ರ ಮನೆ ಆಗಿದೆ. ಸದ್ಯ ವರದಾ ಒಬ್ಬಳೇ ಕಲಾ ಕ್ಷೇತ್ರಕ್ಕೆ ಬಂದವರು. ಮನೆಯವರು ತೆರಿಗಾ ಸಲಹೆಗಾರರು (auditor) ಮತ್ತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಜಿ (treasurer). ಹಾಗೆ ಬೇರೆ ಬೇರೆ ಸಂಘದಲ್ಲಿದ್ದಾರೆ. ತಮ್ಮದೇ ಸಾಯಿ ಕಲಾ ಪ್ರತಿಷ್ಠಾನದ ರೂವಾರಿ.
ಹಿರಿಯ ಕಲಾವಿದರಾದ ಮಯೂರಿ ಉಪಾಧ್ಯಾಯ, ಪ್ರಜ್ಞಾ ಮತ್ತೀಹಳ್ಳಿ, ಗೀತಾ ಸಾಲ್ಕಣಿ, ಸೌಮ್ಯ ಅರುಣ್ ಹಾಗೂ ತವರಿನ ಮತ್ತೆ ಪತಿಯ ಮನೆಯ ಪ್ರೋತ್ಸಾಹವನ್ನು ಎಂದು ಮರೆಯುವಂತಿಲ್ಲ. ವರದಾ ತನ್ನ ಅತ್ತೆ ಬಗ್ಗೆ ತುಂಬು ಮನಸ್ಸಿನಿಂದ ಸ್ಮರಿಸುತ್ತಾರೆ. ಎಷ್ಟೋ ಪ್ರಸಂಗ ಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅಂತವರ ಮನೆ ಸೊಸೆ ಅಂತ ನನಗೆ ಹೆಮ್ಮೆ ಇದೆ ಎಂದು ಉತ್ಸಾಹ ದಿಂದ ಹೇಳುತ್ತಾರೆ. ಅವರ ಸಹಕಾರದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು. ಎಂದು ಹೇಳುತ್ತಾರೆ ವರದಾ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಇದನ್ನು ಓದಿ: