ಮನೆ ದರೋಡೆಗೆ ಪೊಲೀಸ್ ಟ್ರೈನಿಂಗ್! ಆರೋಪಿ ಸೆರೆ
ಚಿಕ್ಕಬಳ್ಳಾಪುರ: ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ ರೌಡಿಶೀಟರ್ಗಳಿಗೆ ಮನೆ ದರೋಡೆಗೆ ತರಬೇತಿ ನೀಡಿ, ಅವರನ್ನು ಅಪರಾಧಕ್ಕೆ ಉತ್ತೇಜಿಸಿದ್ದಾನೆ. ಗೌರಿಬಿದನೂರಿನಲ್ಲಿ ನಡೆದ ದರೋಡೆಯಲ್ಲಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ದರೋಡೆಕೋರರನ್ನು ಹೆಡೆಮುರಿ ಕಟ್ಟಬೇಕಾಗಿದ್ದ ಪೊಲೀಸ್ ದರೋಡೆಗೆ ತರಬೇತಿ ನೀಡುತ್ತಿದ್ದನು ಎಂಬ ಪ್ರಕರಣ ಬೆಳಕಿಗೆ ಬಂದಿದೆ.
ಹೆಣ್ಣೂರು ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ ರೌಡಿಶೀಟರ್ ಹಾಗೂ ಇತರರಿಗೆ ಮನೆ ದರೋಡೆಗೆ ತರಬೇತಿ ನೀಡುತ್ತಿದ್ದನು. ತರಬೇತಿ ನೀಡಿದ ಬಳಿಕ ಅವರನ್ನು ಮನೆ ದರೋಡಗೆ ಕಳುಹಿಸುತ್ತಿದ್ದನು.
ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯ ಶ್ರೀನಿವಾಸ್ ಎಂಬುವರ ಮನೆಯಲ್ಲಿ 2 ಕೋಟಿ ಹಣ ಕೆಜಿಗಟ್ಟಲೇ ಚಿನ್ನ ಇರುವ ಮಾಹಿತಿಯನ್ನು ದರೋಡೆಕೋರರು ಕಲೆಹಾಕಿದ್ದರು.
ಫೆಬ್ರವರಿ 17 ರಂದು ದರೋಡಗೆ ಪ್ಲಾನ್ ಮಾಡಿದ್ದಾರೆ. ಬಳಿಕ, ಫೆಬ್ರವರಿ 20 ರಂದು ಮನೆಗೆ ನುಗ್ಗಿ ಮನೆಯವರನ್ನ ಬೆದರಿಸಿ ದರೋಡಗೆ ಪ್ರಯತ್ನಿಸಿದ್ದಾರೆ.
ಆದರೆ, ಶ್ರೀನಿವಾಸ್ ಅವರ ಮನೆಯಲ್ಲಿ ಸಿಕ್ಕಿದ್ದು ಕೇವಲ ಒಂದು ಉಂಗುರ, 14 ಹರಳುಗಳು, ಎರಡು ಹರಳದ ಕಲ್ಲುಗಳು. ದರೋಡೆ ಪ್ರಕರಣ ದಾಖಲಿಸಿಕೊಂಡ ಗೌರಿಬಿದನೂರು ಪೊಲೀಸರು ತನಿಖೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ದರೋಡೆಕೋರರಿಗೆ ತರಬೇತಿ ನೀಡುತ್ತಿದ್ದು, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಇಲಿಯಾಜ್ ಎಂದು ತಿಳಿದು ಬಂದಿದೆ.