ಸ್ವಾಭಿಮಾನ ಮತ್ತು ದಿಟ್ಟತೆಗೆ ಹೆಸರಾದ ಶ್ಯಾನುಭೋಗರ ಮಗಳು
ಸಿನಿಮಾ ಸಂಭಾಷಣೆ
ಸ್ವಾತಂತ್ರ್ಯ ಪೂರ್ವ ಹೋರಾಟದಲ್ಲಿ ಪ್ರಾಣ ತೆತ್ತ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವನಂತಹ ವೀರ ಮಹಿಳೆಯ ಸಾಹಸ ಕಥೆಗಳನ್ನು ಓದುತ್ತಾ, ಅಭಿನಯಿಸುತ್ತಾ ಬೆಳೆದ ನಾವು ಪ್ರಸ್ತುತ ಕಾಲಘಟ್ಟದಲ್ಲಿ ಮತ್ತೊಂದು ಚರಿತ್ರೆಯ ಕಥೆ ಕಾದಂಬರಿ ಆಧಾರಿತ ಸಿನಿಮಾ ಶ್ಯಾನುಭೋಗರ ಮಗಳು ಸಿನಿಮಾ ನೋಡಿದ ಬಳಿಕ ಸ್ವಾತಂತ್ರ್ಯದ ಕಿಚ್ಚು ಬಡಿದೇಳುವಂತೆ ಮಾಡುತ್ತದೆ.
ಸುಂದರವಾದ ಭಾವ ಗೀತೆಯೊಂದಿಗೆ ತೆರೆದುಕೊಳ್ಳುವ ಸಿನಿಮಾ, ಪ್ರಕೃತಿಯ ಮಡಿಲಲ್ಲಿ ಸಂಪ್ರದಾಯಸ್ಥ ಸಾಮಾನ್ಯ ಜನರ ಸುತ್ತ ಹೆಣೆದ ಒಂದು ಸುಂದರ ಕಥೆಯಾಗಿದೆ.
ಕಥೆ ಸರಳವಾದರೂ ಅರ್ಥಗರ್ಭಿತವಾಗಿ ಹೆಣೆದಿರುವ ಕಾದಂಬರಿ ಆಧಾರಿತವಾಗಿದ್ದು ಸಿನಿಮಾ ಹೀಗೂ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.
ಭುವನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸಿನಿಮಾ ನಾಯಕ ನಟನಾಗಿ ನಿರಂಜನ್ ಶೆಟ್ಟಿ, ನಾಯಕಿ ನಟಿಯಾಗಿ ರಾಗಿಣಿ ಪ್ರಜ್ವಲ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಕಾಂತಾರದಲ್ಲಿ ಪೊಲೀಸ್ ಆಗಿದ್ದ ಕಿಶೋರ್, ಸುಧಾ ಬೆಳವಾಡಿ, ರಮೇಶ್ ಭಟ್, ವಾಣಿಶ್ರೀ, ಅನನ್ಯ, ರಂಜಿತ್ ಕಾರ್ತೀಕ್ ಮಂತಾದವರು ಅಭಿನಯಿಸಿದ್ದಾರೆ.

ಸಿನಿಮಾ ಕಾದಂಬರಿ ಆಧಾರಿತವಾಗಿದ್ದು ಹಿರಿಯ ಪತ್ರಕರ್ತರಾದ ಭಾಗ್ಯ ಕೃಷ್ಣಮೂರ್ತಿ ಅವರು ಬರೆದಿದ್ದಾರೆ. ಸಿಎಂ ನಾರಾಯಣ ನಿರ್ಮಾಪಕರಾಗಿದ್ದು, ಕೂಡ್ಲೂ ರಾಮಕೃಷ್ಣ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಸೊಸೆಯಾದ ಶ್ಯಾನುಭೋಗರ ಮಗಳು ಸಕಲ ಗುಣ ಸಂಪನ್ನೆ, ಸೌಂದರ್ಯವತಿ, ಅತ್ತೆ ಮಾವನನ್ನು ಅತಿಯಾಗಿ ಗೌರವಿಸುವ ಆಕೆ ಎಲ್ಲರಿಗೂ ಅಚ್ಚುಮೆಚ್ಚು.

ಅದು ಬ್ರಿಟೀಷ್ ರು ಶ್ರೀರಂಗ ಪಟ್ಟಣದಲ್ಲಿ ದಬ್ಬಾಳಿಕೆ ಮತ್ತು ಆಡಳಿತ ಮಾಡುವ ಕಾಲ. ಬ್ರಿಟಿಷರ ದುರಹಂಕಾರ ಎಲ್ಲೆ ಮೀರಿ ದೇವಾಲಯದ ಆಭರಣಗಳನ್ನು ಕಳವು ಮಾಡುವುದು, ಹೆಣ್ಮಕ್ಕಳ ಅಪಹರಣದಂತ ವಿಕೃತಿ ಮೆರೆಯುತ್ತಿದ್ದರು. ಇದು ಜನ ಸಾಮಾನ್ಯರಿಗೆ ತೀವ್ರ ತೊಂದರೆ ಆದರೂ ಭಯದಲ್ಲಿ ಬದುಕುತ್ತಿದ್ದರು. ಆದರೆ ಕೆಲವು ಯುವಕರ ತಂಡ ಬ್ರಿಟಿಷರ ವಿರುದ್ಧ ದಂಗೆ ಎದ್ದಿತ್ತು. ದೇವಾಲಯ ಆಭರಣ ಕಳವು ಮಾಡುತಿದ್ದ ಇಂಗ್ಲೀಷರ ಕೊಲೆಯೂ ನಡೆಯಿತು. ಇದು ರಾಜ್ಯದಲ್ಲಿ ಸಂಚಲನ ಮೂಡಿಸಿ ಕಂಡಲ್ಲಿ ಬಂಧಿಸುವ ಕಾರ್ಯಕ್ಕೆ ಬ್ರಿಟಿಷರು ಮುಂದಾದರು.

ಯುವಕರ ಕಾರ್ಯಕ್ಕೆ ರಾಜ್ಯದ ಸುಲ್ತಾನನ ಸಹಕಾರ ದೊರೆಯುತ್ತದೆ ಕೂಡ. ಶ್ಯಾನುಭೋಗರ ಮಗಳು ಶರಾವತಿ ಮನೆಯವರನ್ನು ಎದುರು ಹಾಕಿಕೊಂಡು ತಮ್ಮ ಮತ್ತು ಮೈದುನರ ಹೋರಾಟಕ್ಕೆ ಸಹಕಾರ ನೀಡುತ್ತಾಳೆ. ಒಂದು ದಿನ ದೇವಾಲಯದಲ್ಲಿ ಶರಾವತಿ ರೂಪಕ್ಕೆ ಸುಲ್ತಾನ ಮರುಳಾಗುತ್ತಾನೆ. ಆಕೆಯನ್ನು ತನ್ನವಳನ್ನಾಗಿಸುವ ಬಯಕೆಯಾಗುತ್ತದೆ. ಅಷ್ಟರಲ್ಲಿ ಆಕೆ ಗರ್ಭಿಣಿಯೂ ಆಗಿರುತ್ತಾಳೆ. ಈ ನಡುವೆ ಆರು ವರುಷದ ಬಳಿಕ ಸಿಹಿ ಸುದ್ದಿ ಕೊಟ್ಟ ಸೊಸೆ ಶರಾವತಿ ಮೈದುನನಿಗೆ ಸಹಾಯ ಮಾಡಲು ಹೋಗಿ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾಳೆ.
ಮುಂದೇನಾಯಿತು ಎನ್ನುವ ಕುತೂಹಲಕ್ಕೆ ಈ ಸಿನಿಮಾ ನೀವು ನೋಡಲೇ ಬೇಕು. ಇಂತಹ ಚರಿತ್ರೆ ಕಥೆ ಹೊಂದಿರುವ ಕನ್ನಡ ಸಿನಿಮಾಗಳು ಇನ್ನಷ್ಟು ಮೂಡಿಬರಲಿ ಎನ್ನುವ ಆಶಯ ನಮ್ಮದು.
ಶರಣ್ಯ ಕೋಲ್ಚಾರ್