ಬೆಂಗಳೂರಿನಲ್ಲಿ ತುಳುವರ ಮೀಟ್ ಅಪ್; ರಿಲಾಕ್ಸ್ ಕರಾವಳಿ ಮಂದಿ
ಬೆಂಗಳೂರಿನಲ್ಲಿನ ತುಳುವರನ್ನು ಒಟ್ಟು ಗೂಡಿಸುವ ಕೆಲಸದಲ್ಲಿ ನಿರತವಾಗಿರುವ ಕರಾವಳಿಯ ಮಂದಿ ʼಬೆಂಗಳೂರು ತುಳುವಾಸ್ʼ ಎಂಬ ಇನ್ಸ್ಟಾಗ್ರಾಂ ಕಮ್ಯೂನಿಟಿ ರಚಿಸಿಕೊಂಡು ತುಳು ಭಾಷೆಯ ಕುರಿತಂತೆ ಹಲವು ಕಾರ್ಯಗಳನ್ನು ಮಾಡುತ್ತ ಬಂದಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಲಾಲ್ ಬಾಗ್ ಉದ್ಯಾನವನದಲ್ಲಿ ರವಿವಾರ ಒಂದು ಕಡೆ ಪ್ಲವರ್ ಫೆಸ್ಟಿವಲ್ ನಡೆಯುತ್ತಿದ್ದರೆ ಇತ್ತ ʻಬೆಂಗಳೂರು ತುಳುವಾಸ್ʼ ಮೀಟ್ ಅಪ್ ನಡೆಯಿತು. ಉದ್ಯೋಗ ಹಾಗೂ ಶಿಕ್ಷಣದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ತುಳುವರು ಒಟ್ಟಾಗಿ ಸೇರಿ ರಜಾದಿನವನ್ನು ಕಳೆದಿದ್ದಾರೆ. ಅವಿಭಜಿತ ಉಡುಪಿ-ದಕ್ಷಿಣ ಕನ್ನಡದ ಹಲವು ಮಂದಿ ಕೆಲಸದ ಒತ್ತಡದ ನಡುವೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬೆಂಗಳೂರಿನಲ್ಲಿನ ತುಳುವರನ್ನು ಒಟ್ಟು ಗೂಡಿಸುವ ಕೆಲಸದಲ್ಲಿ ನಿರತವಾಗಿರುವ ಕರಾವಳಿಯ ಮಂದಿ ʼಬೆಂಗಳೂರು ತುಳುವಾಸ್ʼ ಎಂಬ ಇನ್ಸ್ಟಾಗ್ರಾಂ ಕಮ್ಯೂನಿಟಿ ರಚಿಸಿಕೊಂಡು ತುಳು ಭಾಷೆಯ ಕುರಿತಂತೆ ಹಲವು ಕಾರ್ಯಗಳನ್ನು ಮಾಡುತ್ತ ಬಂದಿದೆ. ʻತುಳು ಕಮ್ಯುನಿಟಿ ಮೀಟ್ʼನಲ್ಲಿ ತುಳುಭಾಷೆಯನ್ನು ಹೆಚ್ಚು ಬಳಸುವಿಕೆ ಕುರಿತು ಹಲವು ಚಟುವಟಿಕೆ ನಡೆಸಲಾಯಿತು. ಕರಾವಳಿಯ ಪ್ರಮುಖ ಸ್ಥಳಗಳ ಮೂಲ ತುಳು ಹೆಸರುಗಳ ವಿವರಗಳನ್ನು ಕ್ವಿಜ್ ಮಾದರಿಯಲ್ಲಿ ಪರಿಚಯಿಸಲಾಗಿದೆ.
ಉದ್ಯೋಗ ಕ್ಷೇತ್ರದಲ್ಲಿ ತುಳುವರನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು ಐಟಿ- ಬಿಟಿ ಸಂಸ್ಥೆಗಳಲ್ಲಿನ ಉದ್ಯೋಗಗಳ ಮಾಹಿತಿಯನ್ನು ಹಂಚಿಕೊಳ್ಳುವುದರ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೆಲವು ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಾನವ ಸಂಪನ್ಮೂಲ ವ್ಯಕ್ತಿಗಳು(ಎಚ್ಆರ್), ರಿಕ್ರೂಟರ್ ಮ್ಯಾನೇಜರ್ಗಳು, ಇಂಜಿನಿಯರ್ಸ್ ಸೇರಿ ಹಲವು ಮಂದಿ ಉಪಸ್ಥಿತರಿದ್ದರು.
ಕರಾವಳಿ ಮಂದಿಗೆ ಬೆಂಗಳೂರಿನಲ್ಲಿ ಪಿಜಿ ಹಾಗೂ ವಸತಿಗೃಹಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಸೇರಿ ಹಲವು ಚರ್ಚೆಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಸುಮಾರು ಹತ್ತು ಸಾವಿರಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ʼಬೆಂಗಳೂರು ತುಳುವಾಸ್ʼ ಪೇಜ್ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಜಿತೇಶ್ ಕುಲಾಲ್ ತೋಕೂರು, ಸನತ್ ಅಮೀನ್, ಜಿತೇಶ್ ಹೊಸಬೆಟ್ಟು, ಸಿಂಚನಾ ರಾವ್, ಶ್ರೀಪರ್ಣ ಶೆಟ್ಟಿ, ಕಾರ್ತಿಕ್ ಅಮೈ, ರಂಜನ್ ಜೈ ತುಳುನಾಡು ಮೊದಲಾದವರು ಉಪಸ್ಥಿತರಿದ್ದರು.
ಇದನ್ನು ಓದಿ: