ಗೆಳತಿ ಸೇರಿ 5 ಜನರನ್ನು ಸಾಯಿಸಿ ಪೊಲೀಸರಿಗೆ ಶರಣಾದ ಕೇರಳದ ಸೈಕೋ ಪ್ರೇಮಿ
ತಿರುವನಂತಪುರಂ: ಕೇರಳದ ಪೆರುಮಳ್ ನಲ್ಲಿ ಯುವಕನೊಬ್ಬ ತನ್ನ ಕುಟುಂಬದ ಐವರನ್ನು ಕೊಲೆ ಮಾಡಿದ್ದಾನೆ. ಆರ್ಥಿಕ ಸಂಕಷ್ಟ ಮತ್ತು ವೈಯಕ್ತಿಕ ಘರ್ಷಣೆಗಳು ಈ ಕೃತ್ಯಕ್ಕೆ ಕಾರಣವೆಂದು ಶಂಕಿಸಲಾಗಿದೆ. ಆರೋಪಿ ಅಫಾನ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಕೇರಳದ ತಿರುವನಂತಪುರದಲ್ಲಿ ನಡೆದ ಹತ್ಯಾಕಾಂಡದ ಭಯಾನಕ ಸತ್ಯಗಳು ಒಂದೊಂದಾಗಿ ಬಯಲಾಗುತ್ತಿವೆ. ಗೆಳತಿ ಫರ್ಸಾನಾ ಸೇರಿ 5 ಜನರನ್ನು ಅಫಾನ್ ಎಂಬಾತ ಕೊಲೆ ಮಾಡಿದ್ದಾನೆ. ಹಣಕ್ಕಾಗಿ ತಾಯಿಯ ಮೇಲೂ ಹಲ್ಲೆ ನಡೆಸಿದ್ದ.
ಕೇರಳದ ತಿರುವನಂತಪುರದಲ್ಲಿ ನಡೆದಿರುವ ಹತ್ಯಾಕಾಂಡದ ಮತ್ತಷ್ಟು ವಿವರಗಳು ಹೊರಬಿದ್ದಿವೆ. ಫರ್ಸಾನಾ ಮತ್ತು ಅಫಾನ್ ನಡುವಿನ ಸ್ನೇಹದ ಬಗ್ಗೆ ಅವರ ತಂದೆ ಸುನಿಲ್ ಶಿಜುಗೆ ತಿಳಿದಿರಲಿಲ್ಲ ಎಂದು ತಂದೆಯ ಸ್ನೇಹಿತರು ಹೇಳಿದ್ದಾರೆ. ತನ್ನ ಮಗಳು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಹೋಗುತ್ತೇನೆ ಎಂದು ಮನೆಯಿಂದ ತೆರಳಿದ್ದಳು. ಆ ಬಳಿಕ ಆಕೆ ಹಿಂತಿರುಗಿಲ್ಲ ಎಂದು ಸುನಿಲ್ಗೆ ತಿಳಿದುಬಂದಿದೆ. ಫರ್ಸಾನಾ ಹತ್ತಿರದ ಮನೆಯಲ್ಲಿ ಟ್ಯೂಷನ್ ತೆಗೆದುಕೊಳ್ಳುವುದಾಗಿ ಹೇಳಿ ಮಧ್ಯಾಹ್ನ 3:30 ಕ್ಕೆ ಮನೆಯಿಂದ ಹೊರಹೋಗಿದ್ದಳು ಎನ್ನಲಾಗಿದೆ.
ಇನ್ನು ಸುನೀಲ್ ಶಿಜು ವೆಂಜರಮೂಡುವಿನ ಚಿರಯಿನ್ಕೀಜು ಮೂಲದವರು.ಅವರ ತಾಯಿ ಶೀಜಾ ಅವರ ಊರು ವೆಂಜರಮೂಡು. ಸುನಿಲ್ ವೆಂಜರಮೂಡುವಿನಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಅಂಗಡಿ ನಡೆಸುತ್ತಿದ್ದಾರೆ. ಆರು ವರ್ಷಗಳ ಹಿಂದೆ ಕುಟುಂಬ ಇಲ್ಲಿ ವಾಸಿಸಲು ಪ್ರಾರಂಭಿಸಿತು. ಫರ್ಸಾನಾ ಅಂಚಲ್, ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಎಂಎಸ್ಸಿ ವಿದ್ಯಾರ್ಥಿನಿಯಾಗಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮಧ್ಯಾಹ್ನ ಫರ್ಸಾನಾ ಅವರ ಮೃತದೇಹವನ್ನು ಮುಕುನ್ನೂರಿನ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ. ಚಿರಯಿನ್ಕೀಜು ಕಟ್ಟುಮುರಕ್ಕಲ್ ಚರ್ಚ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಆರೋಪಿ ಅಫಾನ್ ನಿಖರವಾದ ಯೋಜನೆಯೊಂದಿಗೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ 6 ಗಂಟೆಗಳ ಒಳಗೆ 5 ಕೊಲೆಗಳನ್ನು ಮಾಡಿದ್ದಾನೆ. ನಿನ್ನೆ ಬೆಳಿಗ್ಗೆ, ಆರೋಪಿ ಅಫಾನ್ ಮೊದಲು ತನ್ನ ತಾಯಿಯ ಮೇಲೆ ದಾಳಿ ಮಾಡಿದ್ದ. ಮೊದಲ ದಾಳಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ.
ಅಫಾನ್ ಮೊದಲಿಗೆ ತನ್ನ ತಾಯಿ ಎದುರು ಹಣಕ್ಕೆ ಬೇಡಿಕೆ ಇಟ್ಟಿದ್ದ. ಆಕೆ ಹಣ ನೀಡದೇ ಇದ್ದಾಗ ಆಕೆಯ ಮೇಲೆ ದಾಳಿ ಮಾಡಿದ್ದ. ಮಧ್ಯಾಹ್ನ 1.15 ಕ್ಕೆ, ಅವನು ತನ್ನ ಅಜ್ಜಿ ಸಲ್ಮಾ ಬೀವಿ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಆಕೆಯ ಕತ್ತಲ್ಲಿದ್ದ ಚಿನ್ನದ ಸರ ಕದ್ದಿದ್ದಾನೆ. ಚಿನ್ನದೊಂದಿಗೆ ವೆಂಜರಮೂಡು ತಲುಪಿದಾಗ ಆತನಿಕೆ ಚಿಕ್ಕಪ್ಪ ಲತೀಫ್ ಕರೆ ಮಾಡಿದ್ದಾನೆ. ಲತೀಫ್ಗೆ ನಾನು ಮಾಡಿದ ಕೊಲೆ ಗೊತ್ತಾಗಿದೆ ಎಂದು ಭಾವಿಸಿದ ಅಫಾನ್, ಆತನನ್ನು ಕೂಡ ಕೊಲ್ಲಲು ನಿರ್ಧಾರ ಮಾಡಿದ್ದ. ಅವರ ಮನೆಗೆ ಹೋದಾಗ ಲತೀಫ್ ಹಾಘೂ ಆತನ ಪತ್ನಿ ಶಾಹೀದಾ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಅವರ ತಲೆಯ ಹಿಂಭಾಗದಲ್ಲಿ ಭಾರೀ ಪೆಟ್ಟು ಬಿದ್ದಿರುವುದು ಗೊತ್ತಾಗಿದೆ. ಬಹುಶಃ ಸುತ್ತಿಗೆಯಿಂದ ಆತ ಹೊಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಮನೆಗೆ ಗೆಳತಿಯನ್ನು ಕರೆಸಿ ಕೊಲೆ ಮಾಡಿದ್ದಾನೆ. ಕೊನೆಗೆ ತನ್ನ ಸಹೋದರ ಅಫ್ಸಾನ್ ನನ್ನು ಮನೆಯಲ್ಲೇ ಕೊಂದಿದ್ದಾನೆ. ಪರೀಕ್ಷೆ ಮುಗಿಸಿ ಬಂದಿದ್ದ 14 ವರ್ಷದ ಅಫ್ಸಾನ್ ತನ್ನ ತಾಯಿಯ ಹುಡುಕಾಟದಲ್ಲಿದ್ದ. ಈ ವೇಳೆ ಸಹೋದರನನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಕೊಲೆಯ ನಂತರ ಸುತ್ತಿಗೆಯನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾನೆ. ಸ್ನಾನ ಮಾಡಿ ಬಟ್ಟೆ ಬದಲಾಯಿಸಿದ ನಂತರ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.