ಪರೀಕ್ಷೆಯಲ್ಲಿ ಕೆಪಿಎಸ್ಸಿ ಕನ್ನಡದ ಕಗ್ಗೊಲೆ: ಸಿಡಿದೆದ್ದ ಕರವೇ ನಾರಾಯಣಗೌಡ: ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ವಿರುದ್ಧ ಕರವೇ ಸಿಡಿದೆದ್ದಿದ್ದು, ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆಗೆ ಆಗಮಿಸಲಿದ್ದಾರೆ.
ಕಳೆದ ಡಿಸೆಂಬರ್ 29 ರಂದು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಕೆಪಿಎಸ್ಸಿ ಕನ್ನಡದ ಕಗ್ಗೊಲೆ ಮಾಡಿದೆ ಎಂಬ ಆರೋಪವನ್ನು ಪರೀಕ್ಷಾರ್ಥಿಗಳು ಮಾಡಿದ್ದಾರೆ. KAS ಪ್ರಶ್ನೆ ಪತ್ರಿಕೆಯ ಭಾಷಾಂತರದಲ್ಲಿ 79 ಪ್ರಶ್ನೆಗಳು ತಪ್ಪಾಗಿದೆ. ಇದರಿಂದಾಗಿ ಸಾವಿರಾರು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ ಅನ್ನೋದು ಆರೋಪ. ಇದಕ್ಕೆ ಪುಷ್ಟಿ ಕೊಡುವಂತೆ KAS ಪ್ರಿಲಿಮ್ಸ್ ಅರ್ಹ ಅಭ್ಯರ್ಥಿಗಳ ಆಯ್ಕೆಯಲ್ಲಿ ಕನ್ನಡಿಗರ ಸಂಖ್ಯೆ ಕುಸಿತವಾಗಿದೆ. ಇದಕ್ಕೆ ಕಾರಣ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ದೋಷವೇ ಕಾರಣ. ಆಗಿರುವ ದೋಷ ಸರಿಪಡಿಸಲು ಮರು ಪರೀಕ್ಷೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಅಂತೆಯೇ ಕರವೇ ನಾರಾಯಣಗೌಡ ನೇತೃತ್ವದಲ್ಲಿ ನಾಳೆ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕೆಪಿಎಸ್ಸಿ ಕನ್ನಡದ ಕಗ್ಗೊಲೆ ಮಾಡಿ ಪ್ರಶ್ನೆ ಪತ್ರಿಕೆ ತಯಾರಿ ಮಾಡಿದೆ. ಕೂಡಲೇ ಮರು ಪರೀಕ್ಷೆ ಮಾಡಬೇಕು ಎಂದು ಸಾವಿರಾರು ವಿದ್ಯಾರ್ಥಿಗಳು, ಸಾಹಿತಿಗಳ ಆಗ್ರಹಿಸುತ್ತಿದ್ದಾರೆ. ನಾಳೆ ನಡೆಯಲಿರುವ ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಕರವೇ ತಿಳಿಸಿದೆ.
ಇದರ ಮಧ್ಯೆ ರಾಜ್ಯಪಾಲರಿಗೆ ಅಕ್ಸರ (AKSARA) ಸಂಘಟನೆ ದೂರು ನೀಡಿದೆ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಹೀಗಾಗಿ ಮರುಪರೀಕ್ಷೆ ಮಾಡಬೇಕು ಎಂದು ರಾಜ್ಯಪಾಲರಿಗೆ ದೂರು ನೀಡಿದೆ. ರಾಜ್ಯಪಾಲರ ಭೇಟಿ ವೇಲೆ ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘ ಕೂಡ ಹಾಜರಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯಪಾಲರು, ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.