ವಿಭಿನ್ನ ಪ್ರೇಮಕಥೆಯಿಂದ ಮನಗೆದ್ದ ಭುವನಂ ಗಗನಂ
ಶರಣ್ಯ ಕೋಲ್ಚಾರ್
ಹೌದು ಪ್ರೇಮಿಗಳ ದಿನದಂದು ಅದ್ದೂರಿಯಾಗಿ ತೆರೆಕಂಡ ಭುವನಂ ಗಗನಂ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ಗೆ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಸಫಲವಾಗಿದೆ.
ಸಿನಿಮಾ ಭೂಮಿ ಮತ್ತು ಆಕಾಶದ ನಡುವಿನ ಸಂಬಂಧ ಆಗಿರಬಹುದು ಎಂದುಕೊಂಡ ನಾವು ಅದನ್ನು ಬೆಸೆಯಲು ಪ್ರೀತಿ ಎಂಬ ಅಸ್ತ್ರ ಎಷ್ಟು ಪ್ರಭಾವಶಾಲಿಯಾಗಿದೆ.
ಈ ಪ್ರಪಂಚ ಪ್ರೀತಿಗಾಗೇ ಎಷ್ಟೆಲ್ಲ ನೋವು, ಬಾಧೆ ಪಟ್ಟು ಪ್ರೀತಿ ಉಳಿಸಿಕೊಳ್ಳಲು ನಾನಾ ರೀತಿಯ ವ್ಯಥೆ ಕಥೆಗಳು ನಡೆದು ಹೋಗಿವೆ ಅವೆಲ್ಲ ಕಣ್ಣ ಮುಂದೆ ಬರುತ್ತದೆ.
ಈ ಸಿನಿಮಾ ವಿಭಿನ್ನ ಪ್ರೇಮ ಕಥೆಯನ್ನು ಹೊಂದಿದ್ದು ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ಮತ್ತು ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಸಿನಿಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ನಾಯಕಿಯರಾಗಿ ರಾಚೆಲ್ ಡೇವಿಡ್, ಪೊನ್ನು ಅಶ್ವಥಿ ಅದ್ಭುತವಾಗಿ ನಟಿಸಿದ್ದಾರೆ.
ಇನ್ನು ಈ ಸಿನಿಮಾ ಎಸ್ ವಿ ಸಿ ಫಿಲಂಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿದ್ದು ಎಂ. ಮುನೇಗೌಡ ಸಿನಿಮಾ ನಿರ್ಮಾಪಕರು. ಗಿರೀಶ್ ಮುಳಿಮನೆ ಸಿನಿಮಾ ನಿರ್ದೇಶಕರಾಗಿದ್ದಾರೆ.
ತಂದೆಯ ಪಾತ್ರದಲ್ಲಿ ಅಚ್ಚುತ ಕುಮಾರ್, ಶರತ್ ಲೋಹಿತಾಶ್ವ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಸಿನಿಮಾ ಕಥೆಯೂ ಒಂದು ಸಾಮಾನ್ಯ ಕುಟುಂಬದ ನಾಯಕ ಮತ್ತು ಶ್ರೀಮಂತ ಕುಟುಂಬದ ನಾಯಕಿ ಒಂದೇ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಕಾರ್ಯಕ್ರಮದಲ್ಲಿ ಪ್ರೀತಿಯಲ್ಲಿ ಬೀಳುತ್ತಾರೆ. ನಾಯಕ ಅಭಿ ಮತ್ತು ನಾಯಕಿ ನಂದಿನಿ ತಂದೆಯರು ಆತ್ಮೀಯ ಗೆಳೆಯರು ಹಾಗಾಗಿ ಆಗಾಗ ಭೇಟಿಯಾಗುವ ಸಂದರ್ಭದಲ್ಲಿ ನನ್ನ ಮಗಳಿಗೆ ಲಂಡನ್ ಹುಡುಗ ನೋಡಿದೀನಿ ಒಳ್ಳೆ ಕುಲ ಎಂದೇ ಬಡಾಯಿ ಕೊಚ್ಚುತ್ತಾ ಇರುತ್ತಾನೆ ಮತ್ತು ಗೆಳೆಯನ ಮಗನನ್ನು ಪೋಲಿ ಹುಡುಗ ಎಂದು ಟೀಕಿಸುತ್ತಾಲೇ ಇರುತ್ತಾನೆ. ಆದರೆ ಮಗಳು ಪ್ರೀತಿಯಲ್ಲಿ ಬಿದ್ದಿರುವುದು ಗೆಳೆಯನ ಮಗ ಅಭಿಯೊಂದಿಗೇ ಎಂದಾಗ ಕೆಂಡಾಮಂಡಲನಾದ ಅಪ್ಪ ಗೆಳೆಯನಿಗೆ ಮಗನನ್ನು ಸರಿ ದಾರಿಗೆ ತರುವಂತೆ ಕೇಳಿಕೊಳ್ಳುತ್ತಾನೆ. ಈ ವಿಚಾರ ಕಾಲೇಜಿನಲ್ಲಿ ಗುಲ್ಲೆದ್ದು ಕೋಪಗೊಂಡ ಹೀರೋ ಕಾಲೇಜಿನಲ್ಲಿ ಆಕೆಗೆ ತಾಳಿ ಕಟ್ಟುತ್ತಾನೆ. ಎರಡು ಮನೆಯ ಸಂಬಂಧ ಕಡಿದುಕೊಳ್ಳುತ್ತದೆ ಮತ್ತು ಮನೆಯಿಂದ ಹೊರಬಂದ ಪ್ರೇಮಿಗಳು ಸ್ವಂತ ಗೂಡು ಕಟ್ಟಿಕೊಳ್ಳುತ್ತಾರೆ.
ಇಲ್ಲಿ ಒಂದಷ್ಟು ಪುಂಡರೊಂದಿಗೆ ಹೀರೋನ ಫೈಟ್ , ಪ್ರೇಮಿಗಳಿಗೆ ಮುದ ನೀಡುವ ಮೆಲೋಡಿ ಹಾಡು, ಪ್ರಕೃತಿ ಸೌಂದರ್ಯ, ಜೀವನ ಪಾಠ ಜೊತೆಗೆ ನೃತ್ಯ ಅದ್ಭುತವಾಗಿ ಮೂಡಿ ಬಂದಿದೆ.
ಕಾಲೇಜಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳನ್ನು ಬಣ್ಣ ಬಣ್ಣವಾಗಿ ಪರದೆಯಲ್ಲಿ ತೋರಿಸುವ ಜೊತೆಗೆ ರಾಗಿಂಗ್ ನಿಲ್ಲಿಸಿ, ರಕ್ತ ದಾನದಂತಹ ಸೇವೆಗಳಿಗೆ ಮುಂದಾಗಿ ಎನ್ನುವ ಸಂದೇಶವನ್ನೂ ನೀಡಿದ್ದಾರೆ. ಆದರೆ ಕಥಾ ನಾಯಕನ ಕಾರು ಪ್ರಯಾಣದಲ್ಲಿ ಆಕಸ್ಮಿಕವಾಗಿ ಬುದ್ದಿಮಾಂದ್ಯ ನಂತಿರುವ ಮುಗ್ಧ ರಾಮು ಜೊತೆಯಾಗುತ್ತಾನೆ. ಆರಂಭದಲ್ಲಿ ಕಿರಿಕಿರಿ ಎನ್ನಿಸಿದರೂ ಆತನ ಪ್ರಯಾಣದಲ್ಲಿ ಕಥೆಗಳು ತೆರೆದುಕೊಳ್ಳುತ್ತದೆ. ಸಂಬಂಧಗಳ ಅರ್ಥ ತಿಳಿಸುವ ಕಥೆ. ಪ್ರೀತಿಯ ಸುತ್ತಲಿನ ಪರದಾಟಗಳು ವೀಕ್ಷಕರನ್ನು ಕೂತೂಹಲ ಮತ್ತು ಸಿನಿಮಾದಿಂದ ಗಮನ ಆಚೆ ಹೋಗಲು ಬಿಡುವುದಿಲ್ಲ.
ಪದೇ ಪದೇ ರಾಮು ಅಭಿಗೆ ಹೇಳುವ ಸೀಟು ಬೆಲ್ಟ್ ಹಾಕೊಳ್ಳಿ ಎನ್ನುವ ಎಚ್ಚರಿಕೆ ಮಾತು, ಆತ ತಿಳಿಸುವ ಬದುಕಿನ ಅಮೂಲ್ಯ ಸಂದೇಶಗಳು ನಮ್ಮ ಜೀವನದಲ್ಲಿ ಹೌದಲ್ವಾ ಅನ್ನಿಸಿದ್ದುಂಟು. ಇಲ್ಲಿ ಪೃಥ್ವಿ ಅಂಬರ್ ನಟನೆ ಅದ್ಭುತವಾಗಿದೆ. ಎಲ್ಲೂ ಕೂಡ ಪಾತ್ರದಿಂದ ಹೊರಬಂದಂತೆ ಅನ್ನಿಸಲೇ ಇಲ್ಲ. ಆಗಾಗ ಬರುವ ತಿಳಿ ಹಾಸ್ಯ ಕ್ಕೆ ಮನಸಾರೆ ನಕ್ಕರೆ ಸೆಕೆಂಡ್ ಹಾಫ್ ನಲ್ಲಿ ಬರುವ ಕಥೆ ಮನಕಲುಕುತ್ತದೆ. ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.
ತಂದೆ ತಾಯಿ ಸೆಂಟಿಮೆಂಟ್, ಗಂಡ ಹೆಂಡತಿ ಸಂಬಂಧ, ಪ್ರೇಮಿಗಳ ಸಂಕಟ ಎಲ್ಲವನ್ನೂ ಸೇರಿಸಿ ಹೆಣೆದ ಈ ಸಿನಿಮಾ ಎಲ್ಲರೂ ನೋಡಲೇಬೇಕು.