ಅಪರಿಚಿತ ವ್ಯಕ್ತಿಗಳಿಂದ ಇಮೇಲ್: ಬೆಂಗಳೂರು ಏರ್ಪೋರ್ಟ್ಗೆ ಬಾಂಬ್ ಬೆದರಿಕೆ
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2025ನೇ ಸಾಲಿನ ಏರೋ ಇಂಡಿಯಾ ಶೋ ನಡೆಯುತ್ತಿರುವ ಸಂದರ್ಭದಲ್ಲಿಯೇ ಬಾಂಬ್ ಬೆದರಿಕೆ ಬಂದಿದೆ. ದುಷ್ಕರ್ಮಿಗಳು ಫೆಬ್ರವರಿ 8ರಂದು ಇಮೇಲ್ ಮುಖಾಂತರ ಬಾಂಬ್ ಬೆದರಿಕೆ ಹಾಕಿದ್ದಾರೆ. mahanteshs6699@proton.mi ಎನ್ನುವ ಐಡಿಯಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಆ ನನ್ನ ಪತ್ರಕ್ಕೆ ಪ್ರತಿಕ್ರಿಯೆ ಬರದಿದ್ದರೆ ಡ್ರೋನ್ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಕರ್ನಾಟಕದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ. ನಾನು ಪತ್ರ ಬರೆದು ಅವರಿಂದ ಪ್ರತಿಕ್ರಿಯೆ ಕೋರಿದ್ದೇನೆ. ನನ್ನ ಪತ್ರಕ್ಕೆ ಪ್ರತಿಕ್ರಿಯೆ ಬರದಿದ್ದರೆ ಬೆಂಗಳೂರು, ಚೆನ್ನೈ, ಕೇರಳದಿಂದ ಬರುವ ಫ್ಲೈಟ್ಗಳ ಮೇಲೆ ಡ್ರೋನ್ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆಂಗಳೂರು ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆ ಸೆಕ್ಷನ್ 125, 351, 353ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಇನ್ನು ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಏರ್ಪೋರ್ಟ್ಗೆ ಭದ್ರತೆ ಹೆಚ್ಚಿಸಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದರೆ, ಇತ್ತ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತ್ತಿದೆ. ಈ ಎರಡು ಇವೆಂಟ್ಗೆ ಹಲವಾರು ಅಂತಾರಾಷ್ಟ್ರೀಯ ಪ್ರತಿನಿಧಿಗಳು, ರಕ್ಷಣಾ ಕಂಪನಿಗಳು ಮತ್ತು ವಾಯುಯಾನ ತಜ್ಞರು ಆಗಮಿಸಿದ್ದಾರೆ. ಇದರ ಮಧ್ಯೆ ಈ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದರಿಂದ ಯಲಹಂಕ ವಾಯುನೆಲೆ ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿದೆ.
ಯಲಹಂಕ ವಾಯುನೆಲೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ, ಡ್ರೋನ್ ಮೇಲ್ವಿಚಾರಣೆ ಮತ್ತು ಪ್ರಮುಖ ಪ್ರವೇಶ ದ್ವಾರಗಳಲ್ಲಿ ತಪಾಸಣೆಯೊಂದಿಗೆ ಕಣ್ಗಾವಲು ಇಟ್ಟಿದ್ದು, ಏರ್ ಶೋ ಪ್ರದರ್ಶನ ವೇಳೆ ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ನಡೆಯುವಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಏರ್ ಶೋ ಹಿನ್ನೆಲೆಯಲ್ಲಿ ಸಹಸ್ರಾರು ಜನ ವೀಕ್ಷಣೆಗೆ ಆಗಮಿಸಲಿದ್ದು ಅವರ ರಕ್ಷಣೆಗೆ ಬಿಗಿ ಭದ್ರತೆ ಅವಶ್ಯವಾಗಿದ್ದು ತಡೆ ಉಂಟು ಮಾಡುವ ವಿಕೃತ ಮನಸ್ಥಿತಿಗೆ ಕಡಿವಾಣ ಅಗತ್ಯವಾಗಿದೆ.