ಪ್ರಯಾಗ್ರಾಜ್ ಮಹಾ ಕುಂಭಮೇಳ 42 ಕೋಟಿ ಜನರಿಂದ ಪುಣ್ಯ ಸ್ನಾನ:ಮಹಾಶಿವರಾತ್ರಿಯಂದು ಅತ್ಯಧಿಕ ಜನ ಸ್ನಾನ ಮಾಡುವ ನಿರೀಕ್ಷೆ
ಪ್ರಯಾಗರಾಜ್: ತ್ರಿವೇಣಿ ಸಂಗಮದಲ್ಲಿಇದುವರೆಗೂ 42 ಕೋಟಿಗೂ ಹೆಚ್ಚು ಜನರು ಮಹಾಕುಂಭದ ಪ್ರಯುಕ್ತ ಪುಣ್ಯ ಸ್ನಾನ ನೆರವೇರಿಸಿದ್ದಾರೆ ಎಂದು ಉತ್ತರಪ್ರದೇಶ ಸರಕಾರ ತಿಳಿಸಿದೆ. ಮಹಾಕುಂಭ ಮೇಳ ಪೂರ್ಣಗೊಳ್ಳಲು 18 ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರದ ನಿರೀಕ್ಷೆಯನ್ನೂ ಮೀರಿ ಜನರು ಪುಣ್ಯಸ್ನಾನ ಮಾಡಿದ್ದಾರೆ. ಹೀಗೆ ಮುಂದುವರಿದಲ್ಲಿಈ ಬಾರಿಯ ಕುಂಭ ಮುಗಿಯುವ ವೇಳೆಗೆ 50 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡುವ ನಿರೀಕ್ಷೆಯಿದೆ.
ಮೌನಿ ಅಮಾವಾಸ್ಯೆ ದಿನ 8 ಕೋಟಿಗೂ ಹೆಚ್ಚು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಮಕರ ಸಂಕ್ರಾಂತಿಯಂದು 3.5 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ್ದಾರೆ. ವಸಂತ ಪಂಚಮಿಯಂದು 2.5 ಕೋಟಿಗೂ ಹೆಚ್ಚು ಜನರು ಪುಣ್ಯಸ್ನಾನ ಮಾಡಿದ್ದಾರೆ ಎಂದು ಸರಕಾರ ತಿಳಿಸಿದೆ. ಮಹಾಶಿವರಾತ್ರಿಯಂದು ಅತ್ಯಧಿಕ ಮಂದಿ ಪ್ರಯಾಗರಾಜ್ಗೆ ಭೇಟಿ ನೀಡಿ ಅಮೃತ ಸ್ನಾನ ಮಾಡುವ ನಿರೀಕ್ಷೆಯಿದೆ.
ಪಾಕಿಸ್ತಾನದ ಹಿಂದೂಗಳಿಂದ ಪುಣ್ಯಸ್ನಾನ
ಪಾಕಿಸ್ತಾನದ 68 ಹಿಂದೂ ಯಾತ್ರಿಕರ ತಂಡವು ತ್ರಿವೇಣಿ ಸಂಗಮದಲ್ಲಿ ಗುರುವಾರ ಪುಣ್ಯಸ್ನಾನ ಮಾಡಿದೆ. ಯಾತ್ರಿಕರೆಲ್ಲರೂ ಪಾಕಿಸ್ತಾನ ಸಿಂಧ್ ಪ್ರಾಂತ್ಯದವರಾಗಿದ್ದಾರೆ. ಯಾತ್ರಿಕರು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿಮುಳುಗಿ, ತಮ್ಮ ಪೂರ್ವಜನರ ಆತ್ಮಗಳಿಗೆ ಶಾಂತಿ ಕೋರುತ್ತಾ ಪ್ರಾರ್ಥನೆ ಸಲ್ಲಿಸಿದ್ದಾರೆ.
ತಂಡದಲ್ಲಿದ್ದ ಮಹಂತ್ ರಾಮನಾಥ್ ಎಂಬವರು, ”ನಾವೆಲ್ಲರೂ ಮೊದಲು ಹರಿದ್ವಾರಕ್ಕೆ ಭೇಟಿ ನೀಡಿದ್ದೆವು. ಸುಮಾರು 480 ಪೂರ್ವಜರ ಚಿತಾ ಭಸ್ಮವನ್ನು ಅಲ್ಲಿವಿಸರ್ಜಿಸಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಮಹಾಕುಂಭಕ್ಕೆ ಬಂದಿದ್ದೇವೆ,” ಎಂದು ಹೇಳಿದ್ದಾರೆ. ಸಿಂಧ್ ನಿವಾಸಿ ಗೋವಿಂದ ರಾಮ್ ಮಖೇಜ, ”ಎರಡು ಮೂರು ತಿಂಗಳ ಹಿಂದೆ ಮಹಾಕುಂಭದ ಬಗ್ಗೆ ಕೇಳಿದಾಗಿನಿಂದ, ಇಲ್ಲಿಗೆ ಬರುವ ಹಂಬಲ ಮೂಡಿತ್ತು. ಕಳೆದ ಏಪ್ರಿಲ್ನಲ್ಲಿ 250 ಜನರು ಪಾಕಿಸ್ತಾನದಿಂದ ಪ್ರಯಾಗರಾಜ್ಗೆ ಬಂದು ಗಂಗಾ ಸ್ನಾನ ಮಾಡಿದ್ದರು. ಸಿಂಧ್ ಪ್ರಾಂತ್ಯದ ಆರು ಜಿಲ್ಲೆಗಳಾದ ಘೋಟ್ಕಿ, ಸುಕ್ಕುರ್, ಖಾಯಿರ್ಪುರ, ಶಿಕಾರ್ಪುರ, ಕರ್ಕೊಟ್ ಮತ್ತು ಜತಬಲ್ನಾದಿಂದ 68 ಜನರು ಈ ಬಾರಿ ಬಂದಿದ್ದೇವೆ. ಇದರಲ್ಲಿಸುಮಾರು 50 ಮಂದಿ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದಾರೆ,” ಎಂದು ತಿಳಿಸಿದ್ದಾರೆ.
ಏಕತೆ ಸಂದೇಶ ಸಾರುವ ಕುಂಭಮೇಳ
ಭಾರತ ಸಂಸ್ಕೃತಿಯ ಸನಾತನ ಚಿಂತನೆಯು ಭಿನ್ನಾಭಿಪ್ರಾಯಗಳನ್ನು ಅಂತ್ಯಗೊಳಿಸುವ ಏಕತೆಯ ಸಂದೇಶ ಸಾರುತ್ತದೆ. ಮಹಾಕುಂಭದಲ್ಲಿ ಜನರು ಭಿನ್ನಾಭಿಪ್ರಾಯಗಳನ್ನು ಮರೆತು ದೇವರನ್ನು ಕಾಣುತ್ತಾರೆ. ಪರಂಪರೆ, ಮೌಲ್ಯಗಳ ಸಂಭ್ರಮವಿದು ಎಂದು ಕುಂಭಮೇಳಕ್ಕೆ ಭೇಟಿ ವೇಳೆ ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.