ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ಕನಿಷ್ಠ 15 ಮಂದಿ ಮೃತರಾಗಿರುವ ಶಂಕೆ
ಪ್ರಸಿದ್ಧ ಮತ್ತು ಐತಿಹಾಸಿಕ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಜನ ಸಾಗರ ಉಂಟಾಗಿದ್ದು ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 15 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಲಖನೌ: ʼಶಾಹಿ ಸ್ನಾನʼ ಮಾಡಲು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಜನಪ್ರವಾಹವೇ ಹರಿದು ಬಂದಿದೆ. ಇಂದು (ಜ.29) ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಂಬ್ಯುಲೆನ್ಸ್ ಮತ್ತು ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಿಗಿಸಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಸ್ವಚ್ಛತೆ ಕಡೆ ಗಮನ ನೀಡುತ್ತಿಲ್ಲ ಎನ್ನುವ ಬೆನ್ನಲೇ ಜನಸಂದಣಿಯಿಂದಾಗಿ ಆಂಬ್ಯುಲೆನ್ಸ್ ಸಂಚಾರಕ್ಕೂ ತೊಂದರೆಯಾಗಿದೆ. ಎಲ್ಲ ರಸ್ತೆಗಳಲ್ಲೂ ಜನಜಂಗುಳಿ ಕಾಣಿಸುತ್ತಿದೆ. ಸ್ನಾನಘಟ್ಟದ ಬಳಿ ನೆರೆದಿದ್ದ ಜನಜಂಗುಳಿಯಿಂದ ಕೆಲ ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮಹಾಕುಂಭದಲ್ಲಿ ನೆರೆದಿದ್ದ ಅಪಾರ ಭಕ್ತರಿಂದಾಗಿ ಪರಿಸ್ಥಿತಿ ಹತೋಟಿ ತಪ್ಪಿದೆ. ಕೆಲವರು ಬ್ಯಾರಿಕೇಡ್ ಮುರಿದು ಒಮ್ಮೆಲೆ ಒಳನುಗ್ಗಿದ್ದರಿಂದ ಮುಂಜಾನೆ 2.30ರ ವೇಳೆಗೆ ಕಾಲ್ತುಳಿತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ದುರಂತದ ಹಿನ್ನೆಲೆಯಲ್ಲಿ ಶ್ರೀಗಳು ಮೌನಿ ಅಮಾವಾಸ್ಯೆ ಸ್ನಾನವನ್ನು ರದ್ದುಗೊಳಿಸಿದ್ದಾರೆ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಪಿಟಿಐಗೆ ತಿಳಿಸಿದ್ದಾರೆ.

ಮೌನಿ ಅಮಾವಾಸ್ಯೆಯಂದು ನಡೆಯುವ ಶಾಹಿ ಸ್ನಾನವು ಮಹಾ ಕುಂಭಮೇಳದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಪ್ರತಿ 144 ವರ್ಷಗಳಿಗೊಮ್ಮೆ ಸಂಭವಿಸುವ ‘ತ್ರಿವೇಣಿ ಯೋಗ’ ಎಂದು ಕರೆಯಲ್ಪಡುವ ಅಪರೂಪದ ವಿದ್ಯಾಮಾನ ಈ ಬಾರಿ ಸಂಭವಿಸುತ್ತಿದ್ದು, ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಆಗಮಿಸಿದ್ದಾರೆ. ಬುಧವಾರ ಅಂದಾಜು 10 ಕೋಟಿ ಭಕ್ತರು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾ ಕುಂಭಮೇಳ ಆರಂಭವಾದ 17 ದಿನಗಳಲ್ಲಿ ಈಗಾಗಲೇ 15 ಕೋಟಿಗೂ ಹೆಚ್ಚು ಭಕ್ತರು ಸಂಗಮ ಮತ್ತು ಘಾಟ್ಗಳಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮಂಗಳವಾರ (ಜ. 28) ಒಂದೇ ದಿನ 4.8 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ. ಇದು ಮಕರ ಸಂಕ್ರಾಂತಿಯಂದು 3.5 ಕೋಟಿ ಮಂದಿ ಅಮೃತ ಸ್ನಾನ ಮಾಡಿದ್ದರು. ಇದು ಅದಕ್ಕಿಂತಲೂ ಹೆಚ್ಚು ಎಂದು ವರದಿ ತಿಳಿಸಿದೆ.
ಇದನ್ನು ಓದಿ: