ಪ್ರಯಾಗರಾಜ್ನ ಮಹಾ ಕುಂಭಮೇಳದಲ್ಲಿ ‘ಹಿಂದೂ ಏಕತಾ ಪಾದಯಾತ್ರೆ’
ಪ್ರಯಾಗರಾಜ್: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿ 2025ರ ಜ. 22ಕ್ಕೆ 1 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಕುಂಭ ಕ್ಷೇತ್ರದಲ್ಲಿ ‘ಹಿಂದೂ ಏಕತಾ ಪಾದಯಾತ್ರೆ’ ಆಯೋಜಿಸಿತ್ತು. ಮಹಾಕುಂಭ ಕ್ಷೇತ್ರದಿಂದ ವಿಶ್ವಕಲ್ಯಾಣಕ್ಕಾಗಿ ರಾಮರಾಜ್ಯ, ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಗೆ ಧ್ವನಿ ಎತ್ತಲು ಈ ಪಾದಯಾತ್ರೆಯ ಮೂಲಕ ಸಂದೇಶ ನೀಡಲಾಯಿತು.
ಪಾದಯಾತ್ರೆಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರೇರಣಾಸ್ಥಾನ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀ ಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಮತ್ತು ಈಶಾನ್ಯ ಭಾರತದ ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶಕ ಸದ್ಗುರು ನೀಲೇಶ ಸಿಂಗಬಾಳ ಅವರ ಉಪಸ್ಥಿತಿ ಇತ್ತು. ಅಲ್ಲದೆ ಆಧ್ಯಾತ್ಮಿಕ ಸಂಸ್ಥೆಗಳು, ಹಿಂದೂ ಸಂಘಟನೆಗಳು, ಅಲಹಾಬಾದ್ ಹೈಕೋರ್ಟ್ನ ವಕೀಲರು, ಹಿಂದುತ್ವನಿಷ್ಠರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪುಷ್ಪಾಲಂಕೃತ ವಾಹನದಲ್ಲಿ ಹಿಂದೂ ರಾಷ್ಟ್ರದ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಭಾವಚಿತ್ರ ಇರಿಸಲಾಗಿತ್ತು. ಪಾದಯಾತ್ರೆಯಲ್ಲಿ, ಸಂತರು, ಮಹಂತರು, ಹಿಂದುತ್ವನಿಷ್ಠರು ಮತ್ತು ಧರ್ಮಪ್ರೇಮಿಗಳು ಪಾಲ್ಗೊಂಡಿದ್ದರು.
ಪ್ರಯಾಗರಾಜ್ ಕುಂಭ ಕ್ಷೇತ್ರದ ಸೆಕ್ಟರ್ 19ರ ಮುಕ್ತಿ-ಮೋರಿ ಮಾರ್ಗ ಚೌಕದಿಂದ ಪ್ರಾರಂಭವಾದ ಈ ಪಾದಯಾತ್ರೆಯು ಅಲ್ಲಿಂದ ಸಂಗಮ ಲೋವರ್, ಕಾಲಿ ರಸ್ತೆ ಮತ್ತು ನಂತರ ಪುನಃ ಮೋರಿ ಮುಕ್ತಿ ರಸ್ತೆಯ ಮೂಲಕ ಸೆಕ್ಟರ್ 19 (ಕುಂಭ ಕ್ಷೇತ್ರ)ಕ್ಕೆ ಬಂದು ಮುಕ್ತಾಯವಾಯಿತು.
ಸದ್ಗುರು ಡಾ. ಚಾರುದತ್ತ ಪಿಂಗಳೆ ಮಾತನಾಡಿ, ಹಿಂದೂ ಧರ್ಮವು ‘ವಸುದೈವ ಕುಟುಂಬಕಂ’ ಎಂದು ಬೋಧಿಸುತ್ತದೆ. ಅಂತಹ ಧರ್ಮವು ಸಂವಿಧಾನದ ಮೂಲಕ ಅಧಿಕೃತ ರಕ್ಷಣೆ ಪಡೆಯಬೇಕಾದರೆ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅವಶ್ಯಕವಾಗಿದೆ. ವಿಶ್ವ ಕಲ್ಯಾಣಕ್ಕಾಗಿ ಕಾರ್ಯ ಮಾಡುವ ಹಿಂದೂ ಸಂಸ್ಕೃತಿಯನ್ನು ಜೀವಂತವಾಗಿಡಲು ಈ ಬೇಡಿಕೆ ಮುಂದಿಡಲಾಗಿದೆ. ಇಡೀ ಜಗತ್ತು ಮಹಾಕುಂಭ ಕ್ಷೇತ್ರದತ್ತ ಗಮನ ಹರಿಸಿದೆ. ಆದ್ದರಿಂದ ಈ ಪಾದಯಾತ್ರೆಯ ಮೂಲಕ, ಪ್ರಯಾಗರಾಜ್ನ ಕುಂಭಮೇಳದಲ್ಲಿ ಹಿಂದೂ ಸಂತರು, ಮಹಂತರು ಮತ್ತು ದೇಶ-ವಿದೇಶಗಳಲ್ಲಿರುವ ಹಿಂದೂ ಸಮಾಜದ ಮನಗಳಲ್ಲಿನ ಹಿಂದೂ ರಾಷ್ಟ್ರದ ಬೇಡಿಕೆಯನ್ನು ನಾವು ಸರ್ಕಾರಕ್ಕೆ ಮುಟ್ಟಿಸಲು ಪ್ರಯತ್ನಿಸುತ್ತಿದ್ದೇವೆ. ಸಂತರ ಸಾನಿಧ್ಯದಲ್ಲಿ ಮಾಡಲಾದ ಹಿಂದೂ ರಾಷ್ಟ್ರದ ಬೇಡಿಕೆ ಶೀಘ್ರದಲ್ಲೇ ಈಡೇರುತ್ತದೆ ಎಂಬುದು ನಮ್ಮ ನಂಬಿಕೆ ಎಂದು ತಿಳಿಸಿದ್ದಾರೆ.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಸುನೀಲ ಘನವಟ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ಸಮನ್ವಯಕ ವಿಶ್ವನಾಥ ಕುಲಕರ್ಣಿ ಪಾಲ್ಗೊಂಡಿದ್ದರು. ಎಂದು ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಮನ್ವಯಕ ವಿಶ್ವನಾಥ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.