ಮಣಿಪುರದ ಬಿಜೆಪಿ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆದ ಜೆಡಿ(ಯು)
ಇಂಫಾಲ: ರಾಷ್ಟ್ರ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ ನಡೆದಿದ್ದು, ಮಣಿಪುರ ಬಿಜೆಪಿ ಸರ್ಕಾರಕ್ಕೆ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) (Janata Dal United) ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದೆ. ಇದರಿಂದ ಮಣಿಪುರ ವಿಧಾನಸಭೆಯ ಏಕೈಕ ಜೆಡಿ(ಯು) ಶಾಸಕ ಎಂ.ಡಿ.ಅಬ್ದುಲ್ ನಾಸಿರ್ ಪ್ರತಿಪಕ್ಷದ ಸ್ಥಾನದಲ್ಲಿ ಗುರುತಿಸಿಕೊಳ್ಳಲಿದ್ದಾರೆ.
ಮಣಿಪುರದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಇನ್ನು ಮುಂದೆ ಜೆಡಿಯು ಮಣಿಪುರ ಘಟಕವು ಬೆಂಬಲಿಸುವುದಿಲ್ಲ. ನಮ್ಮ ಏಕೈಕ ಶಾಸಕ ಮೊಹಮ್ಮದ್ ಅಬ್ದುಲ್ ನಾಸಿರ್ ಅವರನ್ನು ಸದನದಲ್ಲಿ ವಿರೋಧ ಪಕ್ಷದ ಶಾಸಕರಾಗಿ ಪರಿಗಣಿಸಲಾಗುವುದು” ಎಂದು ಜೆಡಿಯು ಹೇಳಿಕೆಯಲ್ಲಿ ತಿಳಿಸಿದೆ. 2022ರ ಆಗಸ್ಟ್ನಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪ್ರತಿಪಕ್ಷದ ಇಂಡಿಯಾ ಬಣಕ್ಕೆ ಸೇರಿಕೊಂಡಿತ್ತು. ಬಳಿಕ ಎನ್ಡಿಎಗೆ ಒಕ್ಕೂಟಕ್ಕೆ ಮರಳಿತು. 2022ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಆರು ಸ್ಥಾನಗಳನ್ನು ಗೆದ್ದಿತ್ತು. ಆದಾಗ್ಯೂ ಬಳಿಕ 5 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಸಂವಿಧಾನದ 10ನೇ ಅನುಸೂಚಿಯಡಿ ಅವರ ಅನರ್ಹತೆ ಇನ್ನೂ ಸ್ಪೀಕರ್ ನ್ಯಾಯಮಂಡಳಿಯ ಮುಂದೆ ಇತ್ಯರ್ಥಕ್ಕೆ ಬಾಕಿ ಉಳಿದಿದೆ.
ಜೆಡಿಯು ಬೆಂಬಲ ವಾಪಸಾತಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಬಹುಮತವನ್ನು ಹೊಂದಿರುವುದರಿಂದ ಸರ್ಕಾರಕ್ಕೆ ತಕ್ಷಣ ಯಾವುದೇ ಸವಾಲನ್ನು ಎದುರಾಗುವುದಿಲ್ಲ.
60 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 37 ಸ್ಥಾನಗಳನ್ನು ಹೊಂದಿದೆ ಮತ್ತು 5 ನಾಗಾ ಪೀಪಲ್ಸ್ ಫ್ರಂಟ್ ಶಾಸಕರು ಮತ್ತು ಮೂವರು ಸ್ವತಂತ್ರರು ಬೆಂಬಲ ನೀಡಿದ್ದಾರೆ.