ಚಿರತೆಯ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!
ತಿಪಟೂರು : ಸಾಮಾನ್ಯವಾಗಿ ಹುಲಿ, ಚಿರತೆ ಕಂಡರೆ ಜನರು ಮೈಲಿ ದೂರ ಓಡುತ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ, ಚಿರತೆ ಬಾಲ ಹಿಡಿದು ಬೋನಿಗೆ ಹಾಕಿರುವ ಘಟನೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಆನಂದ್ ಎಂಬ ಯುವಕ ಚಿರತೆಯನ್ನು ಹಿಡಿದಿದ್ದು, ಆತನ ಚಾಕಚಕ್ಯತೆ ಮತ್ತು ಧೈರ್ಯ, ಸಾಹಸಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.ಅದನ್ನು ಸೆರೆ ಹಿಡಿಯಲು ಸತತ ಪ್ರಯತ್ನ ನಡೆದಿತ್ತು. ಈ ನಡುವೆ ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಆಗಮಿಸಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು. ಈ ವೇಳೆ ಅಲ್ಲಿಗೆ ಬಂದ ಆನಂದ ಚಿರತೆ ನೋಡಿ ಹಿಡಿಯಲು ಮುಂದಾಗಿ ಚಲಬಿಡದೆ ಕೊನೆಗೆ ಅದರ ಬಾಲ ಹಿಡಿದು ಬೋನಿಗೆ ಹಾಕಿದ್ದಾನೆ. ಯುವಕನ ನೋಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಕೊನೆಗೆ ಸುಮಾರು 2 ವರ್ಷದ ಗಂಡು ಚಿರತೆಯನ್ನು ಹಿಡಿದ ಆನಂದ್ ಅವರ ಸಾಹಸವನ್ನು ಕೊಂಡಾಡಿದ್ದಾರೆ.