ಅಬಕಾರಿ ಭವನದ ಹೆಸರಲ್ಲಿ ವ್ಯವಸ್ಥಿತವಾಗಿ ಪೋಲಾಗುತ್ತಿರುವ ಸಾರ್ವಜನಿಕ ತೆರಿಗೆ ಹಣ
ಪೊದೆ ಸೇರಿದ ಭವ್ಯ ಅಬಕಾರಿ ಭವನ
🖋️ಚಂದನ್ ನಂದರಬೆಟ್ಟು
ಅಬಕಾರಿ ಇಲಾಖೆಯ ಮೂಲಕ ಸರಕಾರಕ್ಕೆ ಅತೀ ಹೆಚ್ಚು ಆದಾಯವನ್ನು ನೀಡುತ್ತಿರುವ ಪುಟ್ಟ ಜಿಲ್ಲೆಯಾಗಿರುವ ಕೊಡಗಿನಲ್ಲಿ ಅಬಕಾರಿ ಇಲಾಖೆಗೆ ಸ್ವಂತ ಎನ್ನುವ ಕಟ್ಟಡವೇ ಇಲ್ಲವಾಗಿದ್ದು, ಇದ್ದ ಸ್ವಂತ ಕಟ್ಟಡ ಕೈಗೆಟುಕದ ದ್ರಾಕ್ಷಿಯಂತಾಗಿದೆ.
2೦೦5 ರಲ್ಲಿ ಕೊಡಗು ಜಿಲ್ಲೆಗೊಂದು ಅಬಕಾರಿ ಭವನ ಬೇಕೆನ್ನುವ ಯೋಜನೆಯಂತೆ ಅಬಕಾರಿ ಭವನ ನಿರ್ಮಿಸುವ ನಿಟ್ಟಿನಲ್ಲಿ ಸರಕಾರ ಎರಡು ಕೋಟಿ ವೆಚ್ಚದ ಯೋಜನೆಯೊಂದನ್ನು ಮಂಜೂರು ಮಾಡಿತ್ತು. ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಟುಹೊಳೆ ಸಮೀಪದಲ್ಲಿ ನಿವೇಶನ ಗುರುತಿಸಿ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಕಾಮಗಾರಿಯ ಬಳಿಕ ನೆಲ ಅಂತಸ್ತಿನ ನಿರ್ಮಾಣವಾಯಿತು. ಆದರೆ ಅನುದಾನದ ಕೊರತೆಯಿಂದ ಹಲವು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡು, ನಿರ್ಮಾಣವಾಗಿರುವಷ್ಟು ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿದೆ.
ಅಬಕಾರಿ ಭವನ
ಉದ್ದೇಶಿತ ಅಬಕಾರಿ ಭವನ ನಿರ್ಮಾಣ ಯೋಜನೆಯ ಪ್ರಕ್ರಿಯೆ 2೦೦5ರಲ್ಲಿ ಆರಂಭವಾಯಿತು. ಈ ನಿಟ್ಟಿನಲ್ಲಿ ರೂ. 2ಕೋಟಿಯ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಪ್ರಥಮ ಹಂತವಾಗಿ ರೂ. 70 ಲಕ್ಷವನ್ನು ಅಬಕಾರಿ ಇಲಾಖೆ ಲೋಕೋಪಯೋಗಿ ಇಲಾಖೆಗೆ ಬಿಡುಗಡೆಗೊಳಿಸಿತು. 2009ರಲ್ಲಿ ಇ-ಪ್ರಕ್ಯೂರ್ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿ ಅದೇ ವರ್ಷ ಪ್ರಥಮ ಹಂತದ ಕಾಮಗಾರಿಯನ್ನೂ ಮಾಡಲಾಗಿತ್ತು. ಬಿಡುಗಡೆಯಾದ ಹಣದಲ್ಲಿ ನೆಲ ಅಂತಸ್ತು ಜೊತೆಗೆ ಬಂಧಿಖಾನೆ, ಅಬಕಾರಿ ಇಲಾಖೆ ವಶಪಡಿಸಿಕೊಂಡ ವಸ್ತುಗಳನ್ನು ದಾಸ್ತಾನಿಡಲು ಗೋಡೌನ್ ಮತ್ತು ಶೌಚಾಲಯವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿತ್ತು.
ಬಳಿಕ ಅನುದಾನದ ಕೊರತೆಯಿಂದ ಯೋಜನೆ ನೆನೆಗುದಿಗೆ ಬಿತ್ತು. ಅಲ್ಲಿ ಚಿಕ್ಕಪುಟ್ಟದಾಗಿ ಗಿಡಗಳು ಹುಟ್ಟಿ ಈಗ ಮರಗಳ ಗಾತ್ರಕ್ಕೆ ತಲುಪಿ ಇನ್ನೇನು ಕೆಲವೇ ಸಮಯದಲ್ಲಿ ಪುಟ್ಟ ಅರಣ್ಯವಾಗಿ ಮಾರ್ಪಾಟಾಗುವ ಸಾದ್ಯತೆಗಳನ್ನು ಅಲ್ಲಗಳೆಯಲಾಗದು.
ದಶಕ ಕಳೆದರೂ ಕಾರ್ಯನಿರ್ವಹಿಸದ ಅಬಕಾರಿ ಭವನ
ದಶಕ ಕಳೆದರೂ ಕಟ್ಟಡ ಮೇಲೇಳಲಿಲ್ಲ. ಈ ಬಗ್ಗೆ ಹಲವು ಬಾರಿ ಪತ್ರ ವ್ಯವಹಾರ ಮಾಡಿದ್ದರೂ ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಈಗ ಪೊದೆಗಳಿಂದಾವೃತ್ತವಾಗಿದೆ. ರೂ.2 ಕೋಟಿಯಲ್ಲಿ ಮುಗಿಯುತ್ತದೆ ಎನ್ನಲಾದ ಯೋಜನೆಗೆ ಪ್ರಸ್ತುತ ಹೆಚ್ಚುವರಿಯಾಗಿ ಇನ್ನೂ ನಾಲ್ಕರಿಂದ ಐದು ಕೋಟಿ ಹಣದ ಅವಶ್ಯಕತೆ ಇದ್ದು. ಕಟ್ಟಡ ಸಾಮಗ್ರಿಗಳ ಬೆಲೆ, ಕಾರ್ಮಿಕರ ಕೂಲಿ ಹೆಚ್ಚಾಗಿರುವುದರಿಂದ ಹಣದ ಅವಶ್ಯಕತೆ ಹೆಚ್ಚಾಗಿದೆ. ಒಟ್ಟು ಯೋಜನೆಯ ಹಣಕ್ಕಿಂತ ಪ್ರಸ್ತುತ ತಯಾರಿಸಿರುವ ಕ್ರಿಯಾಯೋಜನೆಯ ಮೊತ್ತ ದುಪ್ಪಟ್ಟಾಗಿರುವುದು ಸಾರ್ವಜನಿಕರ ತೆರಿಗೆ ಹಣವನ್ನು ವ್ಯವಸ್ಥಿತ ರೀತಿಯಲ್ಲಿ ಪೋಲು ಮಾಡಲಾಗುತ್ತಿದೆ.
ಕಟ್ಟಡವನ್ನು ಮತ್ತೆ ಬಳಸುವ ಉದ್ದೇಶದಿಂದಾಗಿ, ಸಂಪೂರ್ಣವಾಗಿ ನವೀಕರಣಗೊಳಿಸುವ ನಿಟ್ಟಿನಲ್ಲಿ, ಮೊದಲ ಮತ್ತು ಎರಡನೇ ಮಹಡಿಯನ್ನು ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಬೇಕಾದರೆ ಅಂದಾಜು 5 ಕೋಟಿ ರೂ ಗಳ ಅವಶ್ಯಕತೆ ಇದೆ
ಪಿ.ಡಬ್ಲ್ಯೂ.ಡಿ ಇಲಾಖೆಯ ಮಾಹಿತಿಯಂತೆ ರೂ.5 ಕೋಟಿ ಬಿಡುಗಡೆಯಾದಲ್ಲಿ ಮೊದಲ ಹಾಗೂ 2ನೇ ಮಹಡಿ ನಿರ್ಮಾಣ ಮಾಡುವ ಅಲೋಚನೆ ಇದ್ದು ಗಿಡಗಂಟಿಗಳಿಂದ ತುಂಬಿ ಹೋಗಿರುವ ಭವನವನ್ನು ಮತ್ತೆ ಸುಸ್ಥಿತಿಗೆ ತರುವರೇ ಕಾದು ನೋಡಬೇಕಾಗಿದೆ.
ದುಂದುವೆಚ್ಚಕ್ಕೆ ಕಡಿವಾಣವಿರುತಿತ್ತು
ಈಗ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಇಲಾಖೆಯ ಕಛೇರಿಗಳ
ತಿಂಗಳ ಬಾಡಿಗೆ ರೂ.86 ಸಾವಿರವಿದ್ದು,
ಆದರೆ, ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿರುವ ಅಬಕಾರಿ ಇಲಾಖೆ ತಿಂಗಳಿಗೆ ರೂ.86 ಸಾವಿರ ಪಾವತಿಸುತ್ತಿದೆ. ಸ್ವಂತ ಕಟ್ಟಡವಿದ್ದರೆ ಈ ಹಣ ವ್ಯಯವಾಗುವುದನ್ನು ತಪ್ಪಿಸಬಹುದಿತ್ತು.
ಮಡಿಕೇರಿಯಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿಗೆ ರೂ.16 ಸಾವಿರ, ಅಬಕಾರಿ ಉಪ ಆಯುಕ್ತರ ಕಚೇರಿಗೆ ರೂ.70 ಸಾವಿರ ಮಾಸಿಕವಾಗಿ ಬಾಡಿಗೆ ರೂಪದಲ್ಲಿ ಪಾವತಿಯಾಗುತ್ತಿದೆ. ವರ್ಷಕ್ಕೆ ಬಾಡಿಗೆ ಹಣವೇ 1 ಕೋಟಿ 32 ಲಕ್ಷ ತಗುಲುತ್ತದೆ. ಇದೇ ರೀತಿ ಹಲವು ವರ್ಷಗಳಿಂದ ಬಾಡಿಗೆಯನ್ನು ಅಬಕಾರಿ ಇಲಾಖೆ ನೀಡುತ್ತಿದೆ.
ಕಾಡಿನಿಂದಾವೃತ್ತವಾದ ಭವನ
ಕಟ್ಟಡದೊಳಗೆ ಮಳೆ ನೀರು ಸೋರುತ್ತಿರುವದರಿಂದ ಶಿಥಿಲವಾಗುತ್ತಿದೆ. ಸುತ್ತ ಕಾಡು ಬೆಳೆದು ಕಟ್ಟಡ ಗಿಡಗಂಟಿಗಳ ನಡುವೆ ಕೂಡಿದೆ. ಕಿಟಕಿಯ ಗಾಜುಗಳು ಒಡೆದಿವೆ, ರೋಲಿಂಗ್ ಶಟರ್, ಕಿಟಕಿಗಳು ತುಕ್ಕು ಹಿಡಿದಿವೆ ಈ ರೀತಿ ಯಾವ ಪ್ರಾಥಮಿಕ ನಿರ್ವಹಣೆಯೂ ಇಲ್ಲದೆ ಕಟ್ಟಡ ದಿನದಿಂದ ದಿನಕ್ಕೆ ಗುಣಮಟ್ಟ ಕಳೆದುಕೊಳ್ಳುತ್ತಿದ್ದು. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮವಹಿಸದಿರುವುದು ಜನರ ತೆರಿಗೆ ಹಣವನ್ನು ದುರುಪಯೋಗಪಡಿಸುತ್ತಿರುವುದು ಹಾಗು ನಿರ್ಲಕ್ಷಿಸುತ್ತಿರುವಂತೆ ತೋರುತ್ತಿದೆ.
ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರಂತರ ಪತ್ರ ವ್ಯವಹಾರ ಮಾಡುತ್ತಿದ್ದಾರೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಪತ್ರವ್ಯವಹಾರವೂ ತೆರಿಗೆ ಹಣದಲ್ಲೇ ಆಗುತ್ತಿದೆಯಾದರೂ ಪೊದೆಯಂತಾಗಿ ಪರಿವರ್ತಿತವಾಗಿರುವ ಅಬಕಾರಿ ಭವನದಲ್ಲಿ ಇನ್ನು ಮುಂದೆಯಾದರೂ ಅಧಿಕಾರಿಗಳು ಕುಳಿತು ಕಾರ್ಯನಿರ್ವಹಿಸುವರೇ ?
ಬಂಧೀಖಾನೆಗಳಲ್ಲಿ ಅಪರಾಧಿಗಳು ಸಿಲುಕಿಕೊಳ್ಳುವರೇ ?
ದಾಸ್ತಾನಿಡುವ ಗೋದಾಮು ತುಂಬಬಹುದೇ ಎಂದು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಜನರ ಕಣ್ಣಿಗೆ ಭೂತ ಬಂಗಲೆಯಂತೆ ಕಾಣುವ ಅಬಕಾರಿ ಭವನದಲ್ಲಿ ಸರಕಾರದ ಹೆಸರಿನ ನಾಮಫಲಕ ಯಾವಾಗ ಕಂಡುಬರುತ್ತದೆಯೋ ಗೊತ್ತಿಲ್ಲ, ಭವನ ಸುಸಜ್ಜಿತವಾಗಿ ಎದ್ದು ನಿಂತು ತೆರಿಗೆ ಹಣ ಪೋಲಾಗುವುದು ತಪ್ಪಿದರೆ ಅಷ್ಟು ಸಾಕು. ಮತ್ತೆ ಎದ್ದು ನಿಲ್ಲಲಿ ಅಬಕಾರಿ ಭವನ
🖋️ಚಂದನ್ ನಂದರಬೆಟ್ಟು