ಗ್ರಾಮೀಣ ಭಾರತ ಮಹೋತ್ಸವಕ್ಕೆ ಪ್ರಧಾನಿ ಚಾಲನೆ
ನವದೆಲ್ಲಿ: ಜಾತಿ ಹೆಸರಿನಲ್ಲಿ ಕೆಲವರು ಸಮಾಜದ ವಿರುದ್ಧ ವಿಷ ಹರಡುತ್ತಿದ್ದಾರೆ. ಇಂಥ ಸಂಚುಗಳಿಂದ ದೂರವಿದ್ದು ದೇಶದ ಜನರೊಂದಿಗೆ ಪರಸ್ಪರ ಶಾಂತಿ, ಸಂಬಂಧ, ಸಂಸ್ಕೃತಿ, ಪರಂಪರೆ ಹಂಚಿಕೊಂಡು ಒಡನಾಟ ಬಲಪಡಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ನವದೆಹಲಿಯ ಭಾರತಮಂಟಪದಲ್ಲಿ ಜ.4ರಿಂದ 9ರವರೆಗೆ ನಡೆಯಲಿರುವ ಗ್ರಾಮೀಣ ಭಾರತ ಮಹೋತ್ಸವ ಉದ್ಘಾಟಿಸಿದ ಮೋದಿ ಮಾತನಾಡಿದರು. 2024ರಿಂದ ಗ್ರಾಮಗಳ ಅಭಿವೃದ್ಧಿ ಕಡೆಗೆ ಕೇಂದ್ರ ಸರಕಾರ ಗಮನಹರಿಸಿದೆ. 2047ಕ್ಕೆ ವಿಕಸಿತ ಭಾರತ ಪರಿಕಲ್ಪನೆ ಸಾಕಾರಗೊಳ್ಳಲಿದೆ. ಗ್ರಾಮೀಣ ಜನರ ಘನತೆ ಹಾಗೂ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವುದೇ ನಮ್ಮ ಸರಕಾರದ ಮುಖ್ಯ ಧ್ಯೇಯ ಎಂದು ಪ್ರಧಾನಿ ಹೇಳಿದ್ದಾರೆ.
ಗ್ರಾಮೀಣ ಭಾರತ ಉತ್ಸವ ಎಂದರೆ?
ಗ್ರಾಮೀಣ ಭಾರತದಲ್ಲಿ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಸಾಂಸ್ಕೃತಿಕ ವೈಭವದ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಉತ್ಸವ ಆಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ವೃದ್ಧಿಸುವ ಬಗ್ಗೆಯೂ ಇಲ್ಲಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.