ರಾಜ್ಯದಲ್ಲಿ ಮುಂದುವರಿದ ಮುಂಗಾರು ಮಳೆ ಆರ್ಭಟ
ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ನೈಋತ್ಯ ಮುಂಗಾರಿನ ಆರ್ಭಟ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ನೈಋತ್ಯ ಮುಂಗಾರಿನ ಆರ್ಭಟ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ. ಗರಿಷ್ಠ 200 ಮಿಲಿ ಮೀಟರ್ಗೂ ಹೆಚ್ಚಿನ ಮಳೆ ಏರಿಕೆ ಇದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರವು 09 ಜಿಲ್ಲೆಗಳಿಗೆ ಭಾರೀ ಮಳೆ ಪ್ರಯುಕ್ತ ‘ರೆಡ್ ಅಲರ್ಟ್’ ಘೋಷಿಸಿದೆ. ಚಂಡಮಾರುತ ಪ್ರಸರಣ, ವಾಯುಭಾರ ಕುಸಿತದ ಪ್ರಭಾವಗಳಿಂದ ಕಳೆದ ಐದಾರು ದಿನಗಳಿಂದ ಕರ್ನಾಟಕದ ನಾನಾ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಭಾಗದಲ್ಲಿ ರಣಭೀಕರ ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿದೆ. ಮುನ್ಸೂಚನೆ ನೋಡಿದರೆ ಈ ಪ್ರವಾಹ ಸ್ಥಿತಿ ಇನ್ನು ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ. ಏಕೆಂದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಣಭೀಕರ ಮಳೆ ಮೂರು ದಿನ ಮುಂದುವರಿಯಲಿದೆ. ನಂತರ ಎರಡು ದಿನ ಸಾಧಾರಣವಾಗಿ ಸುರಿಯಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗೆ ಮೂರು ದಿನ ಹಾಗೂ ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರಣಭೀಕರ ಮಳೆ ಪ್ರಯುಕ್ತ ಐಎಂಡಿ ಎರಡು ದಿನ ‘ರೆಡ್ ಅಲರ್ಟ್’ ನೀಡಲಾಗಿದೆ. ಉಳಿದಂತೆ ಇಂದಿನಿಂದ ಮುಂದಿನ 48 ಗಂಟೆಗಳಲ್ಲಿ ಬೆಳಗಾವಿ, ಧಾರವಾಡ, ಹಾವೇರಿ, ಹಾಸನ ಜಿಲ್ಲೆಗಳಿಗೆ ಎರಡು ದಿನ, ಮೈಸೂರಿಗೆ ಒಂದು ದಿನ ಭಾರೀ ಮಳೆ ಹಿನ್ನೆಲೆ ‘ಆರೆಂಜ್ ಅಲರ್ಟ್’ ಘೋಷಣೆ ಆಗಿದೆ ಎಂದು ಐಎಂಡಿ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಕರ್ನಾಟಕ ಕರಾವಳಿ ಭಾಗದಲ್ಲಿ ಮುಂದಿನ ಐದಾರು ದಿನ ಮುಂಗಾರು ಆರ್ಭಟಿಸಲಿದೆ. ಮಳೆ ಕಡಿಮೆ ಆಗುವ ನಿರೀಕ್ಷೆ ಸದ್ಯಕ್ಕಿಲ್ಲ. ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಹಾವೇರಿ, ಧಾರವಾಡ, ಬೆಳಗಾವಿ, ಗದಗ, ಬೀದರ್, ಹಾಸನ, ಕೊಡಗು, ಮೈಸೂರು, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಶಾಲೆಗಳಿಗೆ ರಜೆ ಘೋಷಣೆ ನಿರೀಕ್ಷೆ
ಇತ್ತೀಚೆಗೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ, ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಭಾರೀ ಮಳೆಯ ಕಾರಣಕ್ಕೆ ಶಾಲೆಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿತ್ತು. ಇದೀಗ ಮುಂದಿನ ಮೂರು ದಿನಗಳಲ್ಲಿ ಅದೇ ರೀತಿ ಜೋರು ಮಳೆ ಆಗಲಿದೆ. ಜಿಲ್ಲಾಡಳಿತವು ಶಾಲೆಗಳಿಗೆ ರಜೆ ಘೋಷಿಸುವ ಸಾಧ್ಯತೆ ಇದೆ.
ಈ ಮಹಾಮಳೆಗೆ ಕಾರಣವೇನು?
* ಬಂಗಾಳಕೊಲ್ಲಿ ಭಾಗದಲ್ಲಿ ಸೃಷ್ಟಿಯಾಗಿದ್ದ ಚಂಡಮಾರುತದ ಪ್ರಸರಣದ ಗಾಳಿ ವಾಯುವ್ಯ ರಾಜಸ್ಥಾನದ ಮೇಲೆ ಹಾದು ಮಧ್ಯಪ್ರದೇಶ ಮತ್ತು ವಿದರ್ಭದ ಭಾಗದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಲಿಸುತ್ತದೆ.
* ಸದ್ಯ ವಾಯುಭಾರ ಕುಸಿತವು ನೈಋತ್ಯ ತೆಲಂಗಾಣ ಹಾಗೂ ಅದರ ನೆರೆಹೊರೆಗಳಲ್ಲಿ, ಉತ್ತರ ಒಳನಾಡು ಕರ್ನಾಟಕ ಮತ್ತು ಪಕ್ಕದ ತೆಲಂಗಾಣ ಮತ್ತು ರಾಯಲಸೀಮಾ ಮೇಲಿದೆ. ಅದು ಸಮುದ್ರ ಮಟ್ಟದಿಂದ 5.8 ಕಿ.ಮೀ. ಎತ್ತರದಲ್ಲಿದೆ.
* ಮಧ್ಯ ಅರಬ್ಬಿ ಸಮುದ್ರದಿಂದ ದಕ್ಷಿಣ ಕರಾವಳಿ ಒಡಿಶಾದವರೆಗೆ ತೆಲಂಗಾಣ ಮತ್ತು ರಾಯಲಸೀಮಾಕ್ಕೆವರೆಗೆ ಉತ್ತರ ಒಳನಾಡು ಕರ್ನಾಟಕದ ಮೇಲೆ ಮತ್ತು ಸಮುದ್ರ ಮಟ್ಟದಿಂದ 3.1 ಕಿ.ಮೀ. ಎತ್ತರದಲ್ಲಿ ಮೇಲ್ಮಟ್ಟದಲ್ಲಿ ವಾಯುಭಾರ ಕುಸಿತ ಏರ್ಪಟ್ಟಿದೆ. ಈ ಕಾರಣದಿಂದಾಗಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಆರ್ಭಟಿಸುತ್ತಿದೆ ಎಂದು ಹವಾಮಾನ ಕೇಂದ್ರ ಬುಲೆಟಿನ್ ನಲ್ಲಿ ತಿಳಿಸಿದೆ.
ಇದನ್ನು ಓದಿ: