Back To Top

 ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ
May 28, 2025

ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ

ನವದೆಹಲಿ: ಭಾರತವು ಈಗ ಜಪಾನ್ ಅನ್ನು ಮೀರಿಸಿ, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿದೆ. ಈ ಬಗ್ಗೆ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಬಹಿರಂಗಪಡಿಸಿದ್ದಾರೆ. ಅವರು ಶನಿವಾರ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆ ನಂತರ ಮಾತನಾಡುತ್ತಾ, “ಭಾರತದ ಆರ್ಥಿಕತೆ ಈಗ 4 ಟ್ರಿಲಿಯನ್ ಡಾಲರ್ ಆಗಿದೆ.ಭಾರತ ಈಗ ಜಪಾನ್‌ಗಿಂತ ದೊಡ್ಡ ಆರ್ಥಿಕತೆ ಹೊಂದಿದೆ” ಇದಕ್ಕೆ ಅನುಕೂಲಕರವಾದ ಭೌಗೋಳಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಗಳೂ ಕಾರಣ ಎಂದು ತಿಳಿಸಿದರು.
ಭಾರತ ಅಮೆರಿಕಾ, ಚೀನಾ ಮತ್ತು ಜರ್ಮನಿಯ ನಂತರದ ಸ್ಥಾನದಲ್ಲಿದ್ದು, ಮುಂದಿನ 2.5 ರಿಂದ 3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಐಫೋನ್‌ಗಳನ್ನು ಭಾರತ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಅಲ್ಲ, ಅಮೆರಿಕದಲ್ಲಿ ತಯಾರಿಸಬೇಕೆಂದು ನಿರೀಕ್ಷಿಸುತ್ತೇನೆ ಎಂಬ ಇತ್ತೀಚಿನ ಹೇಳಿಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣ್ಯಂ “ಸುಂಕದ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಭಾರತ ತಯಾರಿಕೆಗೆ ಅಗ್ಗದ ದೇಶವಾಗಿದೆ” ಎಂದರು. ಅಲ್ಲದೆ, ಅವರು ಆಗಸ್ಟ್‌ನಲ್ಲಿ ಆಸ್ತಿ ಹಣಗಳಿಕೆ (Asset Monetisation) ಎರಡನೇ ಹಂತದ ಯೋಜನೆಯನ್ನು ಘೋಷಿಸಲಾಗುವುದು ಎಂದೂ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಸುಂಕಗಳ ಪರಿಣಾಮವನ್ನು ನಿಭಾಯಿಸಲು ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದರು. ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆಯಲ್ಲಿ ಟ್ರಂಪ್ ಅವರ ಸುಂಕದ ವಿಷಯ ವಿಶೇಷವಾಗಿ ಚರ್ಚೆಯಾಗಿಲ್ಲ, ಆದರೆ ದೇಶದ ಸುತ್ತಲೂ ಇರುವ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿ ಭಾರತಕ್ಕೆ ಬಹಳ ಅನುಕೂಲವಾಗಿದೆ. “ಇಂತಹ ಪರಿಸ್ಥಿತಿಯನ್ನು ಭಾರತ ತನ್ನ ಲಾಭಕ್ಕೆ ಬಳಸಿಕೊಳ್ಳಬೇಕು” ಸುಂಕಗಳಿಂದ ಹೊರಹೊಮ್ಮುವ ಹೊಸ ಅವಕಾಶಗಳನ್ನು ರಾಜ್ಯಗಳು ಗುರುತಿಸಿ, ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂಬ ಸಲಹೆ ನೀಡಿದರು. ಇತರ ದೇಶಗಳೊಂದಿಗೆ ಹೋಲಿಸಿದರೆ, ಭಾರತ ಈ ಸಂದರ್ಭವನ್ನು ಹೆಚ್ಚು ಬಲವಾಗಿ ಎದುರಿಸಬಹುದು ಎಂಬ ನಂಬಿಕೆ ಅವರು ವ್ಯಕ್ತಪಡಿಸಿದರು.

ಅಗ್ಗದ ಕಾರ್ಮಿಕ ಶಕ್ತಿ ಮತ್ತು ಯುವಪೀಳಿಗೆ ಭಾರತಕ್ಕೆ ಶಕ್ತಿ ನೀಡುತ್ತಿದೆ
ಈಗ ವಿಶ್ವದ ಹೆಚ್ಚಿನ ದೇಶಗಳು ಉತ್ಪಾದನೆಗಾಗಿ ಅಗ್ಗದ ಕಾರ್ಮಿಕ ಶಕ್ತಿಯನ್ನು ಹುಡುಕುತ್ತಿದೆ. ಭಾರತವೇ ಆ ದೇಶಗಳ ಮೊದಲ ಆಯ್ಕೆ ಆಗುತ್ತಿದೆ. ನಮ್ಮಲ್ಲಿ ಕೌಶಲ್ಯಪೂರ್ಣ ಯುವ ಶಕ್ತಿ ಇದೆ. ಈ ಶಕ್ತಿಯೊಂದಿಗೆ ನಾವು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಆದರೆ ಈ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ಮೂಲಸೌಕರ್ಯ ಬಹುಮುಖ್ಯ. ವಿದ್ಯುತ್, ನೀರು, ರಸ್ತೆ, ಕೈಗಾರಿಕಾ ಪಾರ್ಕುಗಳು, ಲಾಜಿಸ್ಟಿಕ್ಸ್ ಮುಂತಾದ ಅವಶ್ಯಕತೆಗಳನ್ನು ರಾಜ್ಯಗಳು ತ್ವರಿತವಾಗಿ ಸುಧಾರಿಸಬೇಕು ಎಂದರು.

ರಾಜ್ಯಗಳು ಈ ಅವಕಾಶಗಳನ್ನು ಉಪಯೋಗಿಸಬೇಕು
“ಯಾವ್ಯಾವ ರಾಜ್ಯಗಳು ಈ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆಯೋ, ಅವುಗಳು ಮುಂದಿನ ವರ್ಷಗಳಲ್ಲಿ ವಿಕಸಿತವಾಗುವ ಸಾಧ್ಯತೆ ಹೆಚ್ಚು” ಎಂದು ಅವರು ಹೇಳಿದರು. ಉಳಿದ ರಾಜ್ಯಗಳು ಸಹ ಇದೇ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

Prev Post

ಹೆಂಡತಿಯರನ್ನು ಹತೋಟಿಯಲ್ಲಿಡಲು ಹುಲಿಯ ಉಗುರು, ಹಲ್ಲು ಕತ್ತರಿಸಿದ ಗಂಡ ಮಹಾಶಯರು

Next Post

ನೈಜೀರಿಯಾದ ನೈಜರ್ ರಾಜ್ಯದಲ್ಲಿ ಧಾರಾಕಾರ ಮಳೆಗೆ 115ಕ್ಕೂ ಹೆಚ್ಚು ಜನ ಸಾವು

post-bars

Leave a Comment

Related post