ಜಮ್ಮು ಕಾಶ್ಮೀರ: ಪಾಕಿಸ್ತಾನದ ಒಟ್ಟು ಒಂಬತ್ತು ಸ್ಥಳಗಳಾದ ಬಹವಾಲ್ಪುರ್, ಮುರಿಡ್ಕೆ, ಗುಲ್ಪುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ಕೋಟ್ ಮತ್ತು ಮುಜಫರಾಬಾದ್ ಮೇಲೆ ನಿಖರವಾದ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನ ಅಡಗುತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಭಾರದ ದಾಳಿಯಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 6 ಸ್ಥಳಗಳು ದಾಳಿಗೊಳಗಾಗಿದ್ದು 3 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಕೋಟಿ, ಮುಜಫರಾಬಾದ್ ಮತ್ತು ಬಹವಾಲ್ಪುರದಲ್ಲಿ ಭಾರತೀಯ ಸೇನೆ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ. ಇನ್ನು ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಂಡಿಯನ್ ಆರ್ಮಿ “ನ್ಯಾಯದಾನ ಆಗಿದೆ.. ಜೈ ಹಿಂದ್ ಎಂದು ಬರೆದುಕೊಂಡಿದೆ “
ಇಡೀ ಘಟನೆಯಲ್ಲಿ ಯಾವೊಬ್ಬ ಹೆಣ್ಣುಮಗಳನ್ನೂ ಕೊಲ್ಲದ ಉಗ್ರಗಾಮಿಗಳು ಕುಟುಂಬದ ಗಂಡಸರನ್ನೇ ಟಾರ್ಗೆಟ್ ಮಾಡಿದ್ದರು. ಉಗ್ರರ ರಾಕ್ಷಸೀ ಕೃತ್ಯಕ್ಕೆ ನವದಂಪತಿಗಳ ಕನಸು ನುಚ್ಚು ನೂರಾಗಿದ್ದರೆ, ಹತ್ತಾರು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಪುಟಾಣಿ ಮಕ್ಕಳು ತಂದೆಯಿಲ್ಲದೇ ಜೀವನ ಎದುರಿಸುವ ಅನಿವಾರ್ಯತೆ ಬಂದಿದೆ.
ಭಯೋತ್ಪಾದಕರ ದಾಳಿಯಲ್ಲಿ ಮನೆಯೊಡೆಯನನ್ನು ಕಳೆದುಕೊಂಡ ಹೆಣ್ಣುಮಕ್ಕಳ ಹಣೆಯಲ್ಲಿನ ಸಿಂಧೂರವೂ ಅಳಿಸಿಹೋಗಿದೆ. ಹೆಣ್ಣು ಮಕ್ಕಳ ಕುಂಕುಮ ಭಾಗ್ಯ ಕಸಿದ ಉಗ್ರರ ಹೇಯ ಕೃತ್ಯದ ವಿರುದ್ಧ ಸಿಡಿದೆದ್ದ ಭಾರತ ಇದೇ ಕಾರಣಕ್ಕೆ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆಸಿದ ಪತ್ರಿದಾಳಿಗೆ “ಆಪರೇಷನ್ ಸಿಂಧೂರ್” ಎಂದು ಹೆಸರಿಡಲಾಗಿದೆಯಂತೆ!