ಹಾಡಿ ಜನರ ಬದುಕಿಗೆ ಬೆಳಕಾದ ಕೋರ
ಶರಣ್ಯ ಕೋಲ್ಚಾರ್
ಘೋರ ಕಾನನದೊಳಗೆ ತೆರೆದುಕೊಂಡ ಬಹುನಿರೀಕ್ಷಿತ ಚಲನ ಚಿತ್ರ “ಕೋರ” ಅದ್ದೂರಿ ತೆರೆ ಕಂಡಿದೆ. ವಿಭಿನ್ನವಾದ ಕಥಾ ವಸ್ತುವಿನೊಂದಿಗೆ ಪ್ರದರ್ಶನಗೊಂಡ ಈ ಚಿತ್ರ ರತ್ನಮ್ಮ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದು ಪಿ. ಮೂರ್ತಿ ನಿರ್ಮಾಪಕರಾಗಿದ್ದಾರೆ.
ಈಗಾಗಲೇ ಚಿತ್ರದ ಟ್ರೇಲರ್ ಮಿಲಿಯನ್ ವೀವ್ಸ್ ಪಡೆದಿದ್ದು ಜನ ಕಾತರದಿಂದ ಕಾಯುತ್ತಿದ್ದ ಸಿನಿಮಾ ಪ್ರೇಕ್ಷಕರಿಗೆ ತೃಪ್ತಿ ನೀಡುವಲ್ಲಿ ಯಶಸ್ವಿಯಾಗಿದೆ.
ಕೋರ ಚಿತ್ರದ ನಾಯಕನ ಪಾತ್ರದಲ್ಲಿ ಟಿ.ಸುನಾಮಿ ಕಿಟ್ಟಿ ಮತ್ತು ನಾಯಕಿಯ ಪಾತ್ರದಲ್ಲಿ ಚರೀಷ್ಮಾ ಅದ್ಭುತವಾಗಿ ಅಭಿನಯಿಸಿದ್ದಾರೆ.
ಮುಖ್ಯ ಪಾತ್ರದಲ್ಲಿ ಎಂ.ಕೆ. ಮಠ ಅತ್ಯದ್ಭುತವಾಗಿ ಮನೋಜ್ಞ ಅಭಿನಯ ತೋರಿದ್ದಾರೆ. ಖಳನಾಯಕನಾಗಿ ಪಿ.ಮೂರ್ತಿ ಮಿಂಚಿದ್ದಾರೆ. ಈ ಸಿನಿಮಾವನ್ನು ಒರಟ ಶ್ರೀ ನಿರ್ದೇಶಿಸಿದ್ದಾರೆ.
ನಲವತ್ತು ವರ್ಷಗಳ ಹಿಂದೆ ಕರಿಘಟ್ಟ ಎನ್ನುವ ಪ್ರಕೃತಿ ರಮಣೀಯ ಕಾಡಿನ ಮಧ್ಯೆ ಹಾಡಿ ಜನರು ಸ್ವಚ್ಚಂದವಾಗಿ ಬದುಕುತಿದ್ದರು. ಹೊಟ್ಟೆ ಪಾಡಿಗೆ ನಿರಂತರ ದುಡಿಯುತ್ತಿದ್ದ ಜನ ಜಾನಪದ ಹಾಡುಗಳು, ನೃತ್ಯಗಳು, ತಮಟೆ ತಯಾರಿಸಿ ನುಡಿಸುತ್ತಾ ನಲಿಯುತ್ತಾ ಇರುವಾಗಲೇ ಸಮಾಜದಲ್ಲಿ ಬಲಾಢ್ಯ ವರ್ಗಗಳ ಕಣ್ಣು ಹಾಡಿಯ ಕಾಡು ಜನರ ಮೇಲೆ ಬೀಳುತ್ತದೆ.
ರೌಡಿಸಂ ಮಾಡುತ್ತ ಬಡಜನರನ್ನು ಸುಲಿಗೆ ಮಾಡಿ ದೌವಲತ್ತಿನಿಂದ ಮೆರೆಯುತ್ತಿದ್ದ ದುಷ್ಟಜನರು ಜಿಲ್ಲಾಧಿಕಾರಿ, ಸರ್ಕಾರಿ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಾಡಿಯ ಕಾಡು ಜನರ ಒಡೆಯ ತಮಟೆ ಮಾಚಯ್ಯ ಮತ್ತು ಆತನ ವಿದ್ಯಾಭ್ಯಾಸ ಇಲ್ಲದ ಮುಗ್ಧ ಜನರನ್ನು ಮೋಸಗೊಳಿಸಿ ಖಾಲಿ ಪೇಪರ್ ಗೆ ಸಹಿ ಮಾಡಿ ಒಕ್ಕಲೆಬ್ಬಿಸುತ್ತಾನೆ.
ಕಾಡನ್ನೇ ಜೀವ, ಜೀವನವೆಂದು ನಂಬಿದ್ದ ಜನರಿಗೆ ಕಾಡನ್ನು ಅಕ್ರಮವಾಗಿ ಒತ್ತವರಿ ಮಾಡಿಕೊಂಡು ಕಾನೂನು ಬಾಹಿರ ಚಟುವಟಿಕೆ ಜೊತೆಗೆ ಕಾಡು ಪ್ರಾಣಿಗಳಿಗೆ ತೊಂದರೆ ನೀಡುತ್ತೀರೆಂದು ಆಪಾದಿಸಿ ಹೊಡೆದೊಡಿಸಲು ತೊಡಗುತ್ತಾರೆ.
ಸಿಕ್ಕ ಸಿಕ್ಕವರನ್ನು ಬಡಿದು ಕೊಂದು ಅಳಿದುಳಿವರನ್ನು ಸಂಕೋಲೆಗಳಿಂದ ಬಂಧಿಸಿ ಚಹಾ ಎಲೆ ಕೀಳುವ ತೋಟದಲ್ಲಿ ಜೀತದಾಳಾಗಿಸುತ್ತಾರೆ.
ಒಂದು ತುತ್ತು ಅನ್ನ, ಸೆಣಬಿನ ಚೀಲದ ಬಟ್ಟೆ, ಚಾಟೀಯೇಟು, ನಿರಂತರ ದುಡಿಮೆ, ಕ್ರೂರಿಗಳ ಕಾವಲು, ಮನೆ, ಮಕ್ಕಳನ್ನು ಬಿಟ್ಟ ಕಾಡು ಜನರು ಅಕ್ಷರಶಃ ನರಕಯಾತನೆ ಅನುಭಿಸುತ್ತಿರುತ್ತಾರೆ.
ಈ ಘಟನೆಯಲ್ಲಿ ಬದುಕುಳಿದ ಅಜ್ಜ ಮತ್ತು ಮೊಮ್ಮಗ ಕೋರ, ಈ ಸಿನಿಮಾದ ಕೇಂದ್ರ ಬಿಂದುಗಳಾಗಿ ಬಿಡುತ್ತಾರೆ.
ಮುಗ್ಧನಾಗಿ ಅಜ್ಜನ ಆಶ್ರಯದಾತನಾಗಿ ಬೆಳೆಯುತ್ತಿದ್ದ ಕೋರ ಅನಿರೀಕ್ಷಿತವಾಗಿ ದುಷ್ಟನ ಬಲೆಗೆ ಬೀಳುತ್ತಾನೆ.
ಮುಂದೆ ಕರಿಘಟ್ಟದ ಇತಿಹಾಸ ತಿಳಿದ ಕೋರ ಏನು ಮಾಡುತ್ತಾನೆ.
ಕಾಡಿನಲ್ಲಿ ಸಿಕ್ಕ ಕನ್ಯೆ ಯಾರು?. ಕಾಡಿನ ಆರಾಧ್ಯ ದೈವ, ದೇವರ ಶಕ್ತಿ ಎಂಥದ್ದು? ಅಂತಿಮವಾಗಿ ಕಾಡುಜನರ ಬದುಕು ಮತ್ತೆ ಕೈ ಸೇರಿತೇ? ಇತ್ಯಾದಿ ಪ್ರಶ್ನೆಗಳಿಗೆ ಸಿನಿಮಾ ನೋಡಿದ ಬಳಿಕವೇ ಉತ್ತರ ಸಿಗುತ್ತದೆ.
ಸಿನಿಮಾ ಪೂರ್ತಿ ಎಲ್ಲೂ ಬೋರು ಹೊಡೆಸದೇ ಅಚ್ಚುಕಟ್ಟಾಗಿ ಸಿನಿಮಾ ಕಥೆ ಹೆಣೆಯುತ್ತಾ ಹೋಗಿರುವುದು ವಿಶೇಷವಾಗಿದೆ.
ಕಾಡಿನೊಳಗಿರುವ ಕಾಣದ ಪ್ರಪಂಚವನ್ನು ಕಂಡು ಹಿಡಿದು ಕಾಡು ಜನರ ಬದುಕು ಬವಣೆಗೆ ಬೆಳಕು ಚೆಲ್ಲುವ ಈ ಸಿನಿಮಾದಲ್ಲಿ ಜಾನಪದ ಹಾಡು, ನೃತ್ಯಗಳು ಅದ್ಭುತವಾಗಿದೆ.
ಖಳನಾಯಕನ ಗಾಂಭೀರ್ಯ, ಫೈಟಿಂಗ್ ಸೀನ್ ಅತ್ಯದ್ಭುತವಾಗಿದೆ. ತುಳುನಾಡ ದೈವಾರಾಧನೆಯನ್ನು ತೋರಿಸಿದ್ದಾರೆ. ಸೌಲಭ್ಯ, ಮೀಸಲಾತಿ ನುಂಗುವ ರಾಜಕಾರಣ ವಾಸ್ತವ ಸ್ಥಿತಿಗೆ ಬೆಳಕು ಚೆಲ್ಲಿದೆ.
ಒಟ್ಟಾರೆಯಾಗಿ ಸೌಲಭ್ಯ ವಂಚಿತ ಕಾಡುಜನರ ಜೀವನ ಕಥೆಯನ್ನು ಆಧರಿಸಿದ ಈ ವಿಭಿನ್ನ ಸಿನಿಮಾ ಎಲ್ಲರೂ ನೋಡಲೇಬೇಕು. ಕನ್ನಡ ಚಿತ್ರರಂಗದಲ್ಲಿ ಇಂತಹ ಸಾಕಷ್ಟು ಸಿನಿಮಾಗಳು ಮೂಡಿ ಬಂದು ಗೆಲುವು ಪಡೆಯಲಿ ಎಂಬುದು ನಮ್ಮ ಆಶಯ.
ಇದನ್ನು ಓದಿ