ಕಚೇರಿಯಲ್ಲೇ ಬೆಡ್ ರೂಂ ಮಾಡಿದ ಕಾರವಾರದ ಪ್ರವಾಸೋದ್ಯಮ ಅಧಿಕಾರಿ ಅಮಾನತು
ಕಾರವಾರ: ಸರ್ಕಾರಿ ಕಚೇರಿಯಲ್ಲೇ ಬೆಡ್ ರೂಮ್ ಮಾಡಿಕೊಂಡ ಘಟನೆ ಕಾರವಾರದ ಪ್ರವಾಸೋದ್ಯಮ ಅಧಿಕಾರಿ ಕಚೇರಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಜಯಂತ್ ಅವರನ್ನು ಅಮಾನತು ಮಾಡಲಾಗಿದೆ. ಸರ್ಕಾರಿ ಅಧಿಕಾರಿ ಜಯಂತ್ ಅಮಾನತುಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ. ಪಾಟೀಲ್ ಸೂಚನೆ ನೀಡಿದ್ದಾರೆ. ಇಂತಹ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲವೆಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪ್ರವಾಸೋದ್ಯಮ ಅಧಿಕಾರಿಯಿಂದ ಕಚೇರಿಯಲ್ಲೇ ಬೆಡ್ ರೂಂ ಮಾಡಿಕೊಂಡ ಆರೋಪ ಕೇಳಿಬಂದಿತ್ತು. ಉತ್ತರ ಕನ್ನಡ ಪ್ರವಾಸೋದ್ಯಮ ಉಪ ನಿರ್ದೇಶಕ ಜಯಂತ್ ತಮ್ಮ ಕಚೇರಿಯಲ್ಲೇ ಬೆಡ್ ರೂಂ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ನನಗೂ ಜಯಂತ್ ಎಂಬ ಅಧಿಕಾರಿ ಬಗ್ಗೆ ಮಾಹಿತಿ ಬಂದಿದೆ. ಇಂಥ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಜೊತೆ ಮಾತಾಡಿದ್ದೇನೆ. ಕಾರವಾರದ ಅಧಿಕಾರಿ ಜಯಂತ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದೇನೆ ಎಂದು ವಿಧಾನಸೌಧದಲ್ಲಿ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.
ಕಾರವಾರ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಶಿಫ್ಟಿಂಗ್ ವೇಳೆ ಕಚೇರಿಯ ಒಂದು ಕೋಣೆಯಲ್ಲಿ ಬೆಡ್ ರೂಂನಲ್ಲಿರುವ ರೀತಿಯ ಮಂಚ, ಹಾಸಿಗೆ ಪತ್ತೆ ಆಗಿತ್ತು. ಮಾಹಿತಿ ಪಡೆದಿರುವ ಸಚಿವ ಹೆಚ್.ಕೆ. ಪಾಟೀಲ್ ಆ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡುವಂತೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.