ಟಿ20 ವಿಶ್ವಕಪ್: ವಿಜೇತ ಆಟಗಾರರಿಗೆ ವಜ್ರದುಂಗುರ
ಮುಂಬಯಿ: ಫೆ.1ರಂದು ಬಿಸಿಸಿಐ ನೀಡಿದ್ದ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ವೇಳೆ 2024ರ ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಿಗೆ ಬಿಸಿಸಿಐ ವಿಶೇಷ ವಜ್ರದುಂಗುರ ನೀಡಿದೆ. ಈ ಮಾಹಿತಿಯನ್ನು ಬಿಸಿಸಿಐ ತಡವಾಗಿ ರಿವೀಲ್ ಮಾಡಿದ್ದು ಟ್ವಿಟರ್ ಎಕ್ಸ್ ಖಾತೆಯಲ್ಲಿ ವಿಡೀಯೊವೊಂದನ್ನು ಹಂಚಿಕೊಳ್ಳುವ ಮೂಲಕ ತಿಳಿಸಿದೆ. ಈ ಉಂಗುರವನ್ನು ಶುದ್ಧ ಚಿನ್ನ, ವಜ್ರದ ಮೂಲಕ ಸಿದ್ಧಪಡಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಉಂಗುರದ ಮಧ್ಯಭಾಗದಲ್ಲಿ ಅಶೋಕ ಚಕ್ರದ ಚಿತ್ರವಿದೆ. ಇದರ ಸುತ್ತ ‘ಇಂಡಿಯಾ ಟಿ20 ವರ್ಲ್ಡ್ ಚಾಂಪಿಯನ್ಸ್ 2024’ ಎಂದು ಇಂಗ್ಲಿಷ್ನಲ್ಲಿ ಕೆತ್ತಲಾಗಿದೆ.
ಜಸ್ಪ್ರೀತ್ ಬುಮ್ರಾ ತಪಾಸಣೆ ಸಂಪೂರ್ಣ:
ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿನ ಗಾಯಕ್ಕೆ ತುತ್ತಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರ ತಪಾಸಣೆ, ಸ್ಕ್ಯಾನಿಂಗ್ ಪ್ರಕ್ರಿಯೆ ಸಂಪೂರ್ಣ ಮುಗಿದಿದ್ದು ಶನಿವಾರ ಬಿಸಿಸಿಐ ವೈದ್ಯಕೀಯ ತಂಡ ಅವರ ಫಿಟ್ನೆಸ್ ವರದಿಯನ್ನು ಪರಿಶೀಲಿಸಿ ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
2021ರಲ್ಲಿ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆಯೂ ಬುಮ್ರಾ ಬೆನ್ನುನೋವಿಗೆ ಸಿಲುಕಿ ಟೂರ್ನಿಗೆ ಅಲಭ್ಯರಾಗಿದ್ದರು. ಈ ವೇಳೆ ಭಾರತ ಲೀಗ್ ಹಂತದಲ್ಲೇ ಮುಗ್ಗರಿಸಿತ್ತು. ಅದರಲ್ಲೂ ಪಾಕಿಸ್ತಾನ ವಿರುದ್ಧ 10 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತ್ತು. ಈ ಬಾರಿಯೂ ಬುಮ್ರಾ ಇಲ್ಲದಿದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಬೇಕಾದರೆ ಬುಮ್ರಾ ಅವರ ಫಿಟ್ನೆಸ್ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
ಒಂದು ವೇಳೆ ಬುಮ್ರಾ ಫಿಟ್ ಆಗದೇ ಹೋದರೆ ಅವರ ಜಾಗದಲ್ಲಿ ವರುಣ್ ಚಕ್ರವರ್ತಿ ಅಥವಾ ಹರ್ಷಿತ್ ರಾಣಾ ಆಡುವ ಸಾಧ್ಯತೆಯಿದೆ.