22ನೇ ಚಿತ್ರಸಂತೆ: ಮಹಾನಗರಿಯಲ್ಲಿ ಬಣ್ಣಬಣ್ಣದ ನೋಟ, ರಸದೂಟ
ಬೆಂಗಳೂರು: ಚಿತ್ರ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ, ಅವರು ರಚಿಸಿದ ವಿವಿಧ ಕಲಾಕೃತಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 22ನೇ ಚಿತ್ರ ಸಂತೆ ಕಲಾರಸಿಕರ ಸಂಭ್ರಮ ನೂರ್ಮಡಿಗೊಳಿಸಿತು.
ರಸ್ತೆಯುದ್ದಕ್ಕೂ ಬಣ್ಣ ಬಣ್ಣದ ಚಿತ್ರಗಳು, ವಿವಿಧ ಚಿತ್ತಾರಗಳು, ಲೈಟಿಂಗ್, ಪೈಂಟಿಂಗ್ಸ್, ವಿವಿಧ ಸಲಕರಣೆಗಳ ಮಾರಾಟ, ಸ್ಥಳದಲ್ಲಿಯೇ ವ್ಯಕ್ತಿಯ ಭಾವಚಿತ್ರ, ವ್ಯಂಗ್ಯ ಚಿತ್ರ ಬಿಡಿಸುವ ಕಲಾವಿದರು, ಡ್ರಾಯಿಂಗ್ ಸಾಮಾಗ್ರಿಗಳು ಪ್ರೇಕ್ಷಕರ ಗಮನ ಸೆಳೆಯಿತು.
ಚಿತ್ರಸಂತೆಯಲ್ಲಿ ಕಲಾವಿದರು ಮತ್ತು ಚಿತ್ರ ಕಲಾಸಕ್ತರ ನಡುವೆ ಸಂವಹನ, ಬಾಂಧವ್ಯ ಬೆಳೆಯುವುದರೊಂದಿಗೆ ವ್ಯಾಪಾರ ಭರಾಟೆ ಜೋರಾಗಿತ್ತು.
ಈ ಬಾರಿ ಚಿತ್ರ ಸಂತೆಯ ಅಲಂಕಾರ ಹೆಣ್ಣುಮಕ್ಕಳಿಗೆ ಸಮರ್ಪಿಸಲಾಗಿತ್ತು. ಪರಿಷತ್ತಿನ ಪ್ರವೇಶ ದ್ವಾರದಿಂದಲೇ ಬಾಲಕಿಯ ಬೃಹತ್ ಕಲಾಕೃತಿ ನಿರ್ಮಿಸಿದ್ದು ಕಲಾಪ್ರೇಮಿಗಳ ಕಣ್ಣರಳಿಸಿತ್ತು.
ಪರಿಷತ್ತಿನ ಆವರಣದಲ್ಲಿ ಕಲಾಕೃತಿಗಳ ಜತೆಗೆ ಕರಕುಶಲ ವಸ್ತುಗಳು ಹಾಗೂ ಕಲಾಕೃತಿ ರಚನೆಗೆ ಅಗತ್ಯವಿರುವ ಬಣ್ಣ ಮತ್ತು ಅಗತ್ಯ ವಸ್ತುಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು.
ಚಿತ್ರಕಲಾ ಪ್ರಕಾರಗಳಾದ ಜಲವರ್ಣ,ಮಧುಬನಿ, ರಾಜಾಸ್ಥಾನ ಶೈಲಿ, ಕಾಫಿ ಪೆಂಟಿಂಗ್, ತಾಂಜಾವೂರು ಶೈಲಿ, ಡಿಜಿಟಲ್ ಪೇಂಟಿಂಗ್, ತೈಲವರ್ಣ, ಉಬ್ಬು ಚಿತ್ರ ಅಕ್ರಿಲಿಕ್ ಸೇರಿ ನಾನಾ ಪ್ರಕಾರದ ಕಲಾಕೃತಿ ಗಮನಸೆಳೆದವು.
ವಿವಿಧ ಜಾನಪದ ನೃತ್ಯ, ಪರಿಸರ ವನ್ಯಜೀವಿಗಳು, ಐತಿಹಾಸಿಕ ದೇವಾಲಯಗಳು, ಗ್ರಾಮೀಣ ಸೊಗಡು, ಯಕ್ಷಗಾನ, ಮಹಿಳೆಯ ವಿವಿಧ ಭಂಗಿಗಳು, ಉತ್ಸವ, ಧಾರ್ಮಿಕ ಆಚರಣೆಗಳು, ಶಿವ , ಗಣೇಶ, ಕೃಷ್ಣ ಸೇರಿ ವಿವಿಧ ದೇವರು ಬುದ್ಧ, ಮಹಾವೀರ, ನಾಟ್ಯ ಶಾಂತಲೆ, ರಂಬೆಯಂತ ಶಿಲಾಬಾಲಿಕೆ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು.
ಪುಟ್ಟ ಮಕ್ಕಳು ಚಿತ್ರ ಬಿಡಿಸಿ ಖುಷಿ ಪಟ್ಟರೆ ಯುವಕ- ಯುವತಿಯರು ಹಚ್ಚೆ ಹಾಕಿಸಿಕೊಂಡು , ರಕ್ತದಲ್ಲಿ ಕಲಾಕೃತಿ ಬಿಡಿಸಿ ನವಿಲು ಗರಿ ಬೀಸುತ್ತಾ ಸಂತೆಯುದ್ದಕ್ಕೂ ನಡೆದಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಈ ಸಂದರ್ಭದಲ್ಲಿ ನಡೆಯಿತು.