ಅಸ್ಸಾದಿ, ಬಯ್ಯಾರೆಡ್ಡಿ ನಿಧನಕ್ಕೆ ಸಚಿವ ಎಂ ಬಿ ಪಾಟೀಲ ಸಂತಾಪ
ಬೆಂಗಳೂರು: ಹೆಸರಾಂತ ಚಿಂತಕ ಪ್ರೊ.ಮುಜಾಫರ್ ಅಸ್ಸಾದಿ ಮತ್ತು ರೈತ ನಾಯಕ ಜಿ ಸಿ ಬಯ್ಯಾರೆಡ್ಡಿ ಅವರುಗಳ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಸ್ಸಾದಿ ಅವರು ತಮ್ಮ ಬರಹಗಳ ಮೂಲಕ ಮತ್ತು ಬಯ್ಯಾರೆಡ್ಡಿ ಅವರು ಹೋರಾಟದ ಮೂಲಕ ಈ ಸಮಾಜವನ್ನು ಕಟ್ಟುತ್ತಿದ್ದರು. ಜನ ಸಮುದಾಯಗಳ ಒಳಿತಿಗಾಗಿ ಇವರಿಬ್ಬರೂ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದರು. ಇವರಿಬ್ಬರ ನಿಧನದಿಂದ ನಾಡು ಬಡವಾಗಿದೆ ಎಂದು ಅವರು ತಮ್ಮ ಶೋಕಸಂದೇಶದಲ್ಲಿ ಸ್ಮರಿಸಿಕೊಂಡಿದ್ದಾರೆ.
ಅಸ್ಸಾದಿ ಅವರು ತಮ್ಮ ಸಮಾಜವಾದಿ ನಿಲುವಿನ ಮೂಲಕ ಚಿಂತನಶೀಲತೆಯನ್ನು ಪ್ರಖರವಾಗಿ ಕಾಪಾಡಿಕೊಂಡಿದ್ದರು. ಇದರಿಂದಾಗಿ ಸಾರ್ವಜನಿಕ ವ್ಯವಸ್ಥೆಯನ್ನು ಸ್ವಸ್ಥವಾಗಿಡಬಹುದು ಎನ್ನುವುದು ಅವರ ನಂಬಿಕೆಯಾಗಿತ್ತು. ಅಸ್ಸಾದಿ ಅವರು ತಾವು ನಂಬಿದ ತತ್ತ್ವಗಳಿಗೆ ಕೊನೆಯವರೆಗೂ ಬದ್ಧರಾಗಿದ್ದರು ಎಂದು ಅವರು ಬಣ್ಣಿಸಿದ್ದಾರೆ.
ಬಯ್ಯಾರೆಡ್ಡಿ ಅವರು ಎಡಪಂಥೀಯ ಹಾದಿಯಲ್ಲಿ ರೈತರು ಮತ್ತು ಕಾರ್ಮಿಕರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ದೇವನಹಳ್ಳಿ ಭೂ ಸ್ವಾಧೀನ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಕರೆದಿದ್ದ ಸಭೆಗೂ ಬಂದಿದ್ದರು. ಅವರ ನಿಧನದಿಂದ ಕೃಷಿಕ ಸಮುದಾಯವು ತನ್ನ ಓರ್ವ ಪ್ರಾಮಾಣಿಕ ನೇತಾರನನ್ನು ಕಳೆದುಕೊಂಡಿದೆ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
ಈ ಧೀಮಂತರ ನಿಧನದಿಂದ ಉಂಟಾಗಿರುವ ನೋವನ್ನು ಭರಿಸಿಕೊಳ್ಳುವ ಶಕ್ತಿ ಎಲ್ಲರಿಗೂ ಬರಲಿ ಮತ್ತು ಪರಮಾತ್ಮನು ಇವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.