ಸಂತೆಕಸಲಗೆರೆ ಪ್ರಕಾಶ್
ಈಗ ಯಾವ ದೇವರನ್ನು ನಂಬಬೇಕು
ಯಾರು ಹೇಳುತ್ತಿಲ್ಲ. ನನಗೂ ಗೊತ್ತಾಗುತ್ತಿಲ್ಲ
ಎಲ್ಲರೂ ಒಂದೊಂದು ದೇವರನ್ನು ನಂಬಿದವರು, ಆರಾಧಕರು!
ಒಂದೊಂದು ಬೀದಿಯಲ್ಲಿ ದೇವರ ಗುಡಿ!
ಎಲ್ಲರ ಎದೆಯ ಮೇಲೂ, ಮುಂಗೈಯಲ್ಲೂ
ದೇವರ ಚಿತ್ರದ ತಾಯಿತವೇ!
ಯಾವ ನೆಂಟರಿಷ್ಟರು, ಸ್ನೇಹಿತರ
ಮನೆಯಲೂ ದೇವರ ಕೋಣೆ, ಗೋಡೆ ಮೇಲೆ ಚಿತ್ರಪಟ
ಮೈಮರೆತಿರುವರು ಹೋಮ-ಹವನದಲ್ಲಿ!
ಯಾವ ದೇವರಿಗೆ ಯಾವ ಶಾಂತಿ
ಬಹಳ ದೊಡ್ಡದಾಗಿದೆ ಅದರ ಪಟ್ಟಿ
ಹೋಮದ ಕುಂಡ ಯಾರ ಮನೆಯಲ್ಲೂ ತಣ್ಣಗಾಗಿಲ್ಲ.
ಒಂದೊಂದು ದೇವರ ಒಲೈಸಿಕೊಂಡಲ್ಲಿ
ಒಲಿಯುವುದು ಅಷ್ಟ ಐಶ್ವರ್ಯ, ನೆಮ್ಮದಿ, ಸುಖ
ನಂಬಿಕೆ ಹಿಂದೆ ಹೋದವರ ದಣಿವು! ಆಸೆಗಳು ದ್ವಿಗುಣ!
ದುಡಿಯುವವರು, ಬಡವರಿಗೆ
ತಮ್ಮ ರಟ್ಟೆಯಲ್ಲಿನ ಶಕ್ತಿಯೇ ದೇವರು!
ಹೋಮ-ಹವನದ ಹಂಗಿಲ್ಲದವರು.
ಒಂದು ಬೊಗಸೆ ಅನ್ನದ ಗೀಳು, ಎದೆಯಲ್ಲೂ
ಹೊತ್ತಿ ಉರಿಯುವುದು. ತಿಂದದ್ದೆ ಮೃಷ್ಟಾನ್ನವಾಗಿ,
ನೆಮ್ಮದಿ ನಿದ್ದೆಯಲ್ಲೇ ದೇವರ ಕಾಣುವನು!
ಈಗ ನನಗೂ ಗೊತ್ತಾಯಿತು,
ನೆಮ್ಮದಿ, ಸುಖ ದುಡಿಯುವುದರಲ್ಲಿದೆ
ದೇವರ ಕಾಣುವ ಶಕ್ತಿ!